ನವದೆಹಲಿ: ಮಯಾಂಕ್ ಅಗರವಾಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸೌರಾಷ್ಟ್ರವನ್ನು 41 ರನ್ ಗಳಿಗೆ ಮಣಿಸಿದ ಕರ್ನಾಟಕ ವಿಜಯ ಹಜಾರೆ ಟ್ರೋಫಿಯನ್ನು ಗೆದ್ದುಕೊಂಡಿದೆ.
ಮಾಯಾಂಕ್ ಅಗರವಾಲ್ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 253 ರನ್ ಪೇರಿಸಿತು. ಇದಕ್ಕೆ ಉತ್ತರಿಸಿದ ಸೌರಾಷ್ಟ್ರ, ಚೇತೇಶ್ವರ ಪೂಜಾರ 94 ರನ್ ಹೊರತಾಗಿಯೂ 41 ರನ್ ಗಳಿಂದ ಸೋಲುಂಡಿತು. ಕರ್ನಾಟಕ ಪರ ಪ್ರಸಿದ್ ಕೃಷ್ಣ ಮತ್ತು ಗೌತಮ್ ತಲಾ 3 ವಿಕೆಟ್ ಉರುಳಿಸಿದರು.
ಮಯಾಂಕ್ ಅಗರ್ ವಾಲ್ 90, ಸಮರ್ಥ್ 48, ದೇಶಪಾಂಡೆ 49 ಮತ್ತು ಗೋಪಾಲ್ 31 ರನ್ ಮಾಡಿ ಕರ್ನಾಟಕದ ಉತ್ತಮ ಮೊತ್ತಕ್ಕೆ ನೆರವಾದರು. ಮಕ್ವಾನಾ 4 ಮತ್ತು ಮಂಕಡ್ 2 ವಿಕೆಟ್ ಉರುಳಿಸಿ ಕರ್ನಾಟಕ ದೊಡ್ಡ ಮೊತ್ತ ಪೇರಿಸದಂತೆ ತಡೆದರು.
ಮಯಾಂಕ್ ಅಗರವಾಲ್ ದೇಶೀಯ ಟೂರ್ನಮೆಂಟ್ ನಲ್ಲಿ 2000 ರನ್ ಬಾರಿಸಿದ ಮೊದಲ ಆಟಗಾರನೆಂಬ ಸಾಧನೆ ಮಾಡಿದರು. ಅಗರವಾಲ್ ಈ ಋತುವಿಲ್ಲಿ ಒಟ್ಟು 2141 ರನ್ ಮಾಡಿದ್ದಾರೆ.
ಈ ಗೆಲುವಿನ ಬಳಿಕ ಕರ್ನಾಟಕದ ವೇಗಿ ಶ್ರೀನಾಥ್ ಅರವಿಂದ್ ಅವರು ದೇಶೀಯ ಕ್ರಿಕೆಟಿನಿಂದ ನಿವೃತ್ತಿ ಪಡೆದುಕೊಂಡರು.