ಬೆಳ್ತಂಗಡಿ: ಶೈಕ್ಷಣಿಕ ಪಾಠಗಳ ಜತೆ ಮಕ್ಕಳ ಕ್ರೀಡೆ,ಸಾಂಸ್ಕೃತಿಕ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದರಿಂದ ಅನೇಕ ಪ್ರತಿಭೆಗಳು ಬೆಳಕಿಗೆ ಬರಲು ಕಾರಣವಾಗುತ್ತಿದೆ ಎಂದು ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಸಿ.ಇ.ಒ. ಎಂ.ವೈ.ಹರೀಶ್ ಹೇಳಿದರು.
ಅವರು ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ, ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷರ ಹ್ಯಾಂಡ್ ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಮನಸ್ಸಿನಲ್ಲಿ ಧೃಡತೆ ಇದ್ದರೆ ಸಾಮರ್ಥ್ಯ ಹೊರಹೊಮ್ಮಲು ಸಾಧ್ಯ. ಸ್ಪರ್ಧೆಗಳಲ್ಲಿ ಉತ್ತಮ ಚಿಂತನೆಯೊಂದಿಗೆ ಶಿಸ್ತಿನಿಂದ ಭಾಗವಹಿಸಿದರೆ ಗೆಲುವು ಸಾಧ್ಯ ಎಂದ ರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧ.ಮಂ. ಕಾಲೇಜಿನ ಪ್ರಿನ್ಸಿಪಾಲ್ ಡಾ.ಉದಯಚಂದ್ರ ಪಿ.ಎನ್. ಮಾತನಾಡಿ ಕ್ರೀಡಾ ಸ್ಫೂರ್ತಿಯೊಂದಿಗೆ ಆಟಗಳು ಸಾಗಿದರೆ ಉತ್ತಮ ಮಟ್ಟದ ಸ್ಪರ್ಧೆ ಜರುಗಲು ಸಹಕಾರಿಯಾಗುತ್ತದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಕ್ರೀಡಾ ನಿರ್ದೇಶಕ ಡಾ. ಹರಿದಾಸ್ ಕೋಳೂರು,ರಾಜ್ಯ ಹ್ಯಾಂಡ್ ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಮಾರಪ್ಪ ಕೆ.ಜೆ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸೋಮಶೇಖರ ಶೆಟ್ಟಿ, ಸಂಪತ್ ಕುಮಾರ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಸ್ವಾಗತಿಸಿದರು. ಪ್ರೊ.ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಉಜಿರೆ ಶ್ರೀ ಧ.ಮಂ. ಕಾಲೇಜಿನ ಆಶ್ರಯದಲ್ಲಿ ಜರಗುವ ಈ ಸ್ಪರ್ಧೆಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದು, ಮಂಗಳವಾರ ಪಂದ್ಯಾಟ ಸಮಾಪನಗೊಳ್ಳಲಿದೆ.