ಬೆಳ್ತಂಗಡಿ: ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಆಶ್ರಯದಲ್ಲಿ ಜ. 9 ರಿಂದ 12 ರವರೆಗೆ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ 19 ವಯೋಮಾನದ ಕೆಳಗಿನ ಬಾಲಕಿಯರ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಲಿದೆ ಎಂದು ಎಸ್ಡಿಎಂ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಬಾಲಭಾಸ್ಕರ್ ತಿಳಿಸಿದರು.
ಅವರು ಶನಿವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಂದ್ಯಾಟದ ವಿವರ ನೀಡಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಉಜಿರೆಯ ಶ್ರೀ ಧ.ಮಂ.ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಎಸ್ಡಿಎಂ ಕಾಲೇಜಿನ ಸುವರ್ಣ ಮಹೋತ್ಸವ ವರ್ಷದ ಅಂಗವಾಗಿ ಕ್ರೀಡಾ ಕೂಟ ನಡೆಯಲಿದೆ. ಜ. 9 ರಂದು ಸಂಜೆ 4.30 ಗಂಟೆಗೆ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಸಚಿವರಾದ ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಸಂಸದ ನಳೀನ್ ಕುಮಾರ್ ಕಟೀಲು, ಶಾಸಕ ಅಭಯಚಂದ್ರ ಜೈನ್ ಅತಿಥಿಗಳಾಗಿರುತ್ತಾರೆ. ಶಾಸಕ ವಸಂತ ಬಂಗೇರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ದೇಶದ 30 ರಾಜ್ಯಗಳಿಂದ, ಕೇಂದ್ರಾಡಳಿತ ಪ್ರದೇಶಗಳಿಂದ ಮತ್ತು ಕೇಂದ್ರೀಯ ವಿದ್ಯಾಲಯಗಳಿಂದ ಆಯ್ದ 19 ವರ್ಷದ ಕೆಳಗಿನ ಪದವಿಪೂರ್ವ ವಿದ್ಯಾರ್ಥಿನಿಯರ 40 ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಲಿವೆ. ಸುಮಾರು 550 ಆಟಗಾರರು, 100 ಕ್ಕೂ ಹೆಚ್ಚು ತೀರ್ಪುಗಾರರು, ಎಸ್ಜಿಎಫ್ಐ ರೆಫರಿಗಳು ಪಂದ್ಯಾಟವನ್ನು ಮುನ್ನಡೆಸಲಿದ್ದಾರೆ. ಜ. 9, 10, 11 ರಂದು ಪ್ರತೀದಿನ ಬೆಳಿಗ್ಗೆ 7 ಗಂಟೆಯಿಂದ 9 ರವರೆಗೆ ಹಾಗೂ ಸಂಜೆ 5 ಗಂಟೆಯಿಂದ 7 ರವರೆಗೆ ಅರ್ಹತಾ ಸುತ್ತಿನ ಪಂದ್ಯಾಟಗಳು ನಡೆಯಲಿವೆ. ಅಂತಿಮ ಸ್ಪರ್ಧೆಯು ಜ. 12 ರಂದು ಸಂಜೆ ನಡೆಯಲಿದ್ದು ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆಯ ಪಂದ್ಯಾಟಗಳು ಹೊನಲು ಬೆಳಕಿನಡಿಯಲ್ಲಿ ನಡೆಯಲಿವೆ ಎಂದರು.
ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಅವರು ಅಧ್ಯಕ್ಷತೆಯನ್ನು ವಹಿಸಲಿರುವ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್ ಹಾಗು ಧರ್ಮಸ್ಥಳ ಶ್ರೇಯಸ್ ಕುಮಾರ್ ಉಪಸ್ಥಿತರಿದ್ದು ಬಹುಮಾನಗಳನ್ನು ವಿತರಿಸಲಿದ್ದಾರೆ. ರಾಷ್ಟ್ರ ಮಟ್ಟದ ಚಾಂಪಿಯನ್ ಶಿಪ್ ಪಂದ್ಯಾಕೂಟ ಕರಾವಳಿ ಕರ್ನಾಟಕದಲ್ಲಿ ಮೊತ್ತಮೊದಲ ಬಾರಿಗೆ ಉಜಿರೆಯಲ್ಲಿ ನಡೆಯಲಿದೆ. ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಹರ್ಷೇಂದ್ರ ಕುಮಾರ್ ಹಾಗೂ ಡಾ. ಬಿ. ಯಶೋವರ್ಮ ಅವರ ಮಾರ್ಗದರ್ಶನದಲ್ಲಿ ಪಂದ್ಯಾಟಕ್ಕೆ ಬೇಕಾದ ಸಿದ್ಧತೆಗಳು ನಡೆಯಲಿವೆ ಎಂದರು.
ಗೋಷ್ಠಿಯಲ್ಲಿ ಎಸ್ಡಿಎಂ ಪ.ಪೂ.ಕಾಲೇಜಿನ ಉಪ ಪ್ರಾಚಾರ್ಯ ಪ್ರಮೋದ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಸಂದೇಶ್ ಪೂಂಜ, ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ ಹೆಗಡೆ ಇದ್ದರು.