ಮುಂಬಯಿ: ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದ ಅಂಬಾಟಿ ರಾಯುಡು ಅವರು ಸ್ಥಾನ ಸಿಗದೆ ನಿರಾಶೆಗೊಂಡು ಬುಧವಾರ ಎಲ್ಲಾ ಮಟ್ಟದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ಈ ಬಗ್ಗೆ ಅಂಬಾಟಿ ರಾಯುಡು ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಪತ್ರ ಕೂಡ ಕಳುಹಿಸಿದ್ದಾರೆ.
ಶಿಖರ್ ಧವನ್ ಮತ್ತು ವಿಜಯ್ ಶಂಕರ್ ಗಾಯಾಳುವಾದರೂ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದೆ ಇದ್ದ ಕಾರಣದಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಶ್ವಕಪ್ ಗೆ ತಂಡ ಆಯ್ಕೆಯಾದ ವೇಳೆ ರಾಯುಡು ಅವರು ಹೆಚ್ಚುವರಿ ಆಟಗಾರರ ಪಟ್ಟಿಯಲ್ಲಿದ್ದರು.
ರಾಯುಡು ಬಲಗೈ ಬ್ಯಾಟ್ಸ್ ಮೆನ್ ಹಾಗೂ ಆಫ್ ಬ್ರೇಕ್ ಬೌಲರ್ ಆಗಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ್ದ ರಾಯುಡು ಅವರು 19ರ ಕೆಳಹರೆಯದ ಭಾರತ ತಂಡದ ನಾಯಕತ್ವ ವಹಿಸಿದ್ದರು. 2004ರಲ್ಲಿ 19ರ ಕೆಳಹರೆಯದ ಭಾರತ ತಂಡ ಸೆಮಿಫೈಲಿಗೇರಿತ್ತು.
2013ರ ಜುಲೈ 24ರಂದು ಜಿಂಬಾಬ್ವೆ ವಿರುದ್ಧ ಅಂತಾರಾಷ್ಟ್ರೀಯ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದರು. 2019ರ ಮಾರ್ಚ್ 8ರಂದು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. 55 ಪಂದ್ಯಗಳಲ್ಲಿ 1694 ರನ್ ಬಾರಿಸಿದ್ದರು. ಮೂರು ಶತಕ ಹಾಗೂ 10 ಅರ್ಧಶತಕ ಬಾರಿಸಿದ್ದಾರೆ.