ನವೆದೆಹಲಿ : ಟೀಂ ಇಂಡಿಯಾದ ನೂತನ ಕೋಚ್ ಆಗಿ ‘ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ನೇಮಕವಾಗಿದ್ದಾರೆ. ‘ದಿ ಲೆಜೆಂಡ್’ ಭಾರತ ತಂಡದ ಮುಖ್ಯ ಕೋಚ್ ಹುದ್ದೆಯ ಸಾರಥ್ಯ ವಹಿಸುತ್ತಿರುವುದು ಕನ್ನಡಿಗರಿಗೆ ಇನ್ನಿಲ್ಲದ ಖುಷಿ ತಂದಿದೆ.
ಯುಎಇಯಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಬಳಿಕ ದ್ರಾವಿಡ್ ಟೀಂ ಇಂಡಿಯಾಗೆ ಮಾರ್ಗದರ್ಶಕರಾಗಲಿದ್ದಾರೆ.ಟಿ-20 ವಿಶ್ವಕಪ್ ಮುಗಿದ ಬಳಿಕ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸರಣಿ ಆಡಲಿದೆ. ಟಿ-20 ವಿಶ್ವಕಪ್ ಬೆನ್ನಲ್ಲೇ ನಾಯಕ ಸ್ಥಾನದಿಂದ ವಿರಾಟ್ ಕೊಹ್ಲಿ ಕೆಳಗಿಳಿಯಲಿದ್ದಾರೆ. ಹೊಸ ಕೋಚ್ ಬಗ್ಗೆ ಎದ್ದಿದ್ದ ಊಹಾಪೋಗಳಿಗೆ ಫುಲ್ ಸ್ಟಾಪ್ ಹಾಕಿದ್ದ ಬಿಸಿಸಿಐ ಬುಧವಾರ ರಾಹುಲ್ ದ್ರಾವಿಡ್ ಹೆಸರು ಘೋಷಿಸಿತ್ತು. ಆದರೆ ಇನ್ನೂ ಕೊಹ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿಲ್ಲ. ಹಲವಾರು ಕ್ರಿಕೆಟ್ ತಜ್ಞರು ರೋಹಿತ್ ಶರ್ಮಾ ಮುಂಚೂಣಿಯಲ್ಲಿದ್ದಾರೆ ಎಂದು ನಂಬಿದರೆ, ಕೆಲವರು ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ರಿಷಭ್ ಪಂತ್ ಹೆಸರನ್ನು ಸೂಚಿಸಿದ್ದಾರೆ. ಹೊಸ ನಾಯಕನ ಆಯ್ಕೆಗೆ ಬಿಸಿಸಿಐ ಮುಂದಾಗಿದ್ದು, ಯಾರು ಟೀಂ ಇಂಡಿಯಾದ ನಾಯಕನಾಗಲಿದ್ದಾರೆಂಬುದು ಕುತೂಹಲ ಮೂಡಿಸಿದೆ.
ಹೊಸದಾಗಿ ನೇಮಕಗೊಂಡ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಹಲವು ಪ್ರಶ್ನೆಗಳಿಗೆ ಕೇಳಲಾಗಿತ್ತು. ಈ ಪೈಕಿ ಭಾರತ ತಂಡದ ಮುಂದಿನ ನಾಯಕ ಯಾರಾಗಬೇಕೆಂದು ಬಯಸುತ್ತೀರಿ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ್ದ ದ್ರಾವಿಡ್, ‘ರೋಹಿತ್ ಶರ್ಮಾ ನನ್ನ ಮೊದಲ ಆಯ್ಕೆ. ಇದರ ಹೊತರಾಗಿ ಕೆ.ಎಲ್.ರಾಹುಲ್ ನನ್ನ ಆಯ್ಕೆ’ ಅಂತಾ ತಿಳಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ(Team India)ದ ಮುಂದಿನ ನಾಯಕ ಹಿಟ್ ಮ್ಯಾನ್ ರೋಹಿತ್ ಶರ್ಮಾ ಆಯ್ಕೆ ಬಹುತೇಕ ಪಕ್ಕಾ ಆಗಿದೆ. ಕನ್ನಡಿಗ ಕೆ.ಎಲ್.ರಾಹುಲ್ ಗೆ ಉಪನಾಯಕನ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.
ಸದ್ಯ ದ್ರಾವಿಡ್ ಅವರು ಭಾರತ ತಂಡದ ನಾಯಕತ್ವಕ್ಕೆ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಹೆಸರುಗಳನ್ನು ಸೂಚಿಸಿದ್ದು, ಅಂತಿಮವಾಗಿ ಬಿಸಿಸಿಐ ಯಾರಿಗೆ ಮಣೆಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ. ಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಸಣರಿಯಲ್ಲಿ 3 ಟಿ-20, 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನ.17ರಂದು ಜೈಪುರ, ನ.19ರಂದು ರಾಂಚಿ ಮತ್ತು ನ.21ರಂದು ಕೋಲ್ಕತ್ತಾದಲ್ಲಿಟಿ-20 ಪಂದ್ಯಗಳು ನಡೆಯಲಿವೆ. ನ.25 ರಿಂದ 29ರವರೆಗೆ ಕಾನ್ಪುರದಲ್ಲಿ ಮತ್ತು ಡಿ.3 ರಿಂದ 7ರವರೆಗೆ ಮುಂಬೈನಲ್ಲಿ ಟೆಸ್ಟ್ ಪಂದ್ಯಗಳು ನಡೆಯಲಿವೆ.