ಮಡಿಕೇರಿ: ಕೊಡವ ಕುಟುಂಬಗಳ ನಡುವೆ ನಡೆಯಲಿರುವ ಹಾಕಿ ನಮ್ಮೆ ಕುಲ್ಲೇಟಿರ ಕಪ್ 2018 ಈ ಬಾರಿ ಏ. 15ರಿಂದ ಮೇ. 13ರವರೆಗೆ ನಾಪೋಕ್ಲು ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕುಲ್ಲೇಟಿರ ಹಾಕಿ ನಮ್ಮೆ ಸಮಿತಿ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ ಹೇಳಿದ್ದಾರೆ.
ಈ ಕುರಿತು ತಮ್ಮ ಕುಟುಂಬದ ಐನ್ ಮನೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 22ನೇ ವರ್ಷದ ಕೊಡವ ಕುಟುಂಬಗಳ ನಡುವಿನ ಹಾಕಿ ನಮ್ಮೆ ಇದಾಗಿದ್ದು, ಈ ಬಾರಿ ನಾಪೋಕ್ಲಿನ ಕುಲ್ಲೇಟಿರ ಕುಟುಂಬ ಸಾರಥ್ಯ ವಹಿಸಿದ್ದು, ಏ. 15ರಂದು ಬೆಳಿಗ್ಗೆ 10.30 ಗಂಟೆಗೆ ಹಾಕಿ ಪಂದ್ಯಾವಳಿ ಆರಂಭವಾಗಲಿದೆ. ಈ ಬಾರಿ ಸರಳವಾಗಿ ಆಚರಿಸುವದರ ಮೂಲಕ ಖರ್ಚು ವೆಚ್ಚವನ್ನು ಕಡಿಮೆಗೊಳಿಸಿ ಮಾದರಿ ಹಾಕಿ ನಮ್ಮೆ ಆಚರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕುಲ್ಲೇಟಿರ ಹಾಕಿ ನಮ್ಮೆ ಸಮಿತಿ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ, ಅಂತಿಮ ಪಂದ್ಯಾಟ ಮೇ. 13 ರ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣೆಯಂದು ನಡೆಯಲಿರುವ ಪಂದ್ಯಾಟಗಳಲ್ಲಿ ಬದಲಾವಣೆ ಮಾಡಲಾಗುವದು. ಹಾಕಿ ನಮ್ಮೆಗೆ ಸಂಸದ ಪ್ರತಾಪ್ ಸಿಂಹ ಅವರು ಹಾಕಿ ಹಬ್ಬದ ಪ್ರಯುಕ್ತ ರೂ. 20 ಲಕ್ಷ ಮಂಜೂರು ಮಾಡಿದ್ದಾರೆ. ರಾಜ್ಯ ಸರಕಾರಕ್ಕೆ 50 ಲಕ್ಷ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸುಮಾರು 1.50 ಕೋಟಿ ರೂ. ವೆಚ್ಚವಾಗಲಿದೆ. ದಾಖಲೆಯ 333 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲು ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದರು.
ಸಂಚಾಲಕ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ 147 ವರ್ಷಗಳ ಇತಿಹಾಸವಿರುವ ನಾಪೋಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಂಸದರ 20 ಲಕ್ಷ ರೂ. ಅನುದಾನದಲ್ಲಿ ಮಿನಿ ಗ್ಯಾಲರಿ ನಿರ್ಮಿಸಲು ಉದ್ದೇಶಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಚೆರಿಯಪರಂಬು ಕೆ.ಎಸ್.ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ಮೂರು ಲಕ್ಷ ರೂ. ಅನುದಾನ ನೀಡಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುಲ್ಲೇಟಿರ ಪಟ್ಟೆದಾರ ಮತ್ತು ಸಲಹಾ ಸಮಿತಿ ಹಿರಿಯ ಸದಸ್ಯರಾದ ಕುಲ್ಲೇಟಿರ ಮಾದಪ್ಪ, ಕೆ.ಕೆ.ಗುರುವಪ್ಪ, ಕೆ.ಸಿ.ಮುತ್ತಪ್ಪ. ಹಾಕಿ ಸಮಿತಿ ಸದಸ್ಯರಾದ ಶಂಕರಿ ಚಂಗಪ್ಪ, ನಂದಾ ನಾಚಪ್ಪ, ದೇವಿ ದೇವಯ್ಯ, ರಾಜೇಶ್, ಸುರೇಶ್, ಲೊಕೇಶ್, ರಾಜಾ, ಬಿನ್ನಿ ಬೋಪಣ್ಣ ಇದ್ದರು.