ಗಾಯದ ಸಮಸ್ಯೆಗೊಳಗಾಗುವ ಟೀಂ ಇಂಡಿಯಾ ಆಲ್ರೌಂಡರ್ ದೀಪಕ್ ಚಾಹರ್ ಚೇತರಿಸಿಕೊಳ್ಳಲು ಇನ್ನು ಕನಿಷ್ಠ 4 ತಿಂಗಳ ವಿಶ್ರಾಂತಿ ಅಗತ್ಯವಿದ್ದು, ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಿರುವ ಟಿ.20 ವಿಶ್ವಕಪ್ ನಿಂದಲೂ ಹೊರಬೀಳಲಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಬೆನ್ನು ನೋವಿಗೆ ಒಳಗಾಗಿದ್ದ ಚಾಹರ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ ಸಿಎ) ಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಗಾಯದ ಕಾರಣದಿಂದ ಚಾಹರ್ ಈಗಾಗಲೇ ಐಪಿಎಲ್ ನಿಂದಲೂ ಹೊರಬಿದ್ದಿದ್ದು ಚೆನ್ನೈ ಸೂಪರ್ ಕಿಂಗ್ಸ್ ಪ್ರಾಂಚೈಸಿಗೆ ಬಾರಿ ಹೊಡೆತ ನೀಡಿದೆ.
ಪ್ರಮುಖ ವೇಗಿಯ ಸೇವೆಯಿಲ್ಲದೆ ಬೌಲಿಂಗ್ ವಿಭಾಗದಲ್ಲಿ ಸೊರಗಿರುವ ಚೆನ್ನೈ ತಂಡ ಆಡಿದ 5 ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋಲುಂಡಿದೆ. ಚಾಹರ್ ಗೆ 14 ಕೋಟಿ ನೀಡಿ ಚೆನ್ನೈ ತಂಡವು ಹರಾಜಿನಲ್ಲಿ ಖರೀದಿಸಿತ್ತು. ದೀಪಕ್ ಚಾಹರ್ ಸ್ಕಾನ್ ವರದಿಯಂತೆ ಅವರಿಗೆ ವಿಶ್ರಾಂತಿಯ ಅಗತ್ಯವಿದ್ದು, 4 ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್ ನಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ.
ಆದ್ದರಿಂದ ರಾಜಸ್ಥಾನ ಮೂಲದ ವೇಗಿ 2022 ರ ಅಕ್ಟೋಬರ್, ನವೆಂಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಅನ್ನು ಸಹ ತಪ್ಪಿಸಿಕೊಳ್ಳಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.