ಉಡುಪಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಡಿಸಿಎಂಗಳ ವಿವಾದಕ್ಕೆ ಸಂಬಂಧಿಸಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಇಂದು ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಮುಖ್ಯಮಂತ್ರಿಗಳು ಬದಲಾಗಬೇಕೆಂದು ಆಡಳಿತ ಪಕ್ಷ ಕಾಂಗ್ರೆಸ್ ನವರೇ ಹೇಳುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಶಾಸಕರು, ಮಂತ್ರಿಗಳು ಧ್ವನಿ ಎತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿ ಬಿಟ್ಟು ಎಲ್ಲಾ ಶಾಸಕರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಕಾಂಗ್ರೆಸ್ ನ ಹಿರಿಯರೇ ವ್ಯಂಗ್ಯ ಮಾಡುತ್ತಿದ್ದಾರೆ ಎಂದರು.
ಕರ್ನಾಟಕ ರಾಜಕಾರಣ ಗೊಂದಲಮಯವಾಗಿದೆ. ಜನಸಾಮಾನ್ಯರಿಗೆ ಆಡಳಿತ ನೀಡುವ ಬಿಗಿತನ ಸರಕಾರ ಕಳೆದುಕೊಂಡಿದೆ. ಮಠಾಧೀಶರು ನೀಡುವ ಹೇಳಿಕೆಗಳು ಆಡಳಿತದ ಮೇಲೆ ಪರಿಣಾಮ ಬೀರಿದೆ. ಒಂದೇ ಒಂದು ಬಡವರ ಕಲ್ಯಾಣ ಯೋಜನೆಗಳು ಜಾರಿಯಾಗುತ್ತಿಲ್ಲ. ಹಾಸ್ಟೆಲ್ ಗಳು ಸಿಗುತ್ತಿಲ್ಲ ಎಂಬ ದೂರು ಸಾರ್ವತ್ರಿಕವಾಗಿದೆ. ಪರಿಶಿಷ್ಟ ಜಾತಿ ಪಂಗಡದ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿದ್ದಾರೆ. ಬಹಳ ದಿನಗಳ ಕಾಲ ಈ ಸರ್ಕಾರ ಮುಂದುವರಿಯುತ್ತೆ ಅನಿಸಲ್ಲ ಎಂದು ಹೇಳಿದರು.
ವಿಪಕ್ಷವಾಗಿ ನಾವು ಏನು ಮಾಡಬಹುದು ಎಲ್ಲವನ್ನು ಮಾಡುತ್ತಿದ್ದೇವೆ. ವಾಲ್ಮೀಕಿ ನಿಗಮದ ಹಗರಣ ಕುರಿತು ಹೋರಾಟ ಮಾಡಿದ್ದರಿಂದ ತನಿಖೆ ಆಗುತ್ತಿದೆ. ಈ ಸರ್ಕಾರದ್ದು ಆನೆ ಚರ್ಮ, ದಬ್ಬಾಳಿಕೆಯ ಮಾತುಗಳನ್ನು ಆಡುತ್ತಿದೆ. ಸರಕಾರ ನಡೆಸುವ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ವಾಲ್ಮೀಕಿ ಹಗರಣ ವಿಚಾರದಲ್ಲಿ ರಕ್ಷಣೆ ಮಾಡಲು ಸರಕಾರ ಮುಂದಾಗಿದೆ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ನಾವು ಒತ್ತಾಯಿಸಿದ್ದೇವೆ. ಹಿಂದುಳಿದ ವರ್ಗದವರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.
ನೀಟ್ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ನೀಟ್ ಬಗ್ಗೆ ತಪ್ಪಾದಾಗ ಕ್ರಮ ಕೈಗೊಳ್ಳದಿದ್ದರೆ ಸರಕಾರದ ತಪ್ಪು. ಆದರೆ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿ ಆಗಿದೆ. ತಪ್ಪಾಗಿದ್ದರೆ ಕ್ರಮ ಆಗಿಯೇ ಆಗುತ್ತೆ. ಅನಗತ್ಯ ಈ ಬಗ್ಗೆ ಗಲಾಟೆ ಎಬ್ಬಿಸಿ ಸದನ ಮುಂದೂಡಲು ಒತ್ತಾಯಿಸಿದ್ದಾರೆ. ಕಾಂಗ್ರೆಸ್ಸಿನ ಈ ಆರೋಪಕ್ಕೆ ಪ್ರತಿಕ್ರಿಯೆ ಕೊಡುವುದು ಸಾಧ್ಯವಿಲ್ಲ. ಸಿಬಿಐ ತನಿಖೆ ಗಿಂತ ಈ ದೇಶದಲ್ಲಿ ದೊಡ್ಡ ತನಿಖೆ ಇಲ್ಲ. ಕಾಂಗ್ರೆಸ್ ಅನಗತ್ಯ ಮೊಂಡವಾದ ಮಾಡುತ್ತಿದೆ ಎಂದು ಟೀಕಿಸಿದರು.