ಮೈಸೂರು: ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ನಾಯಕ್ ಹತ್ಯೆ ಪೂರ್ವ ನಿಯೋಜಿತ ಎಂದು ಟಿ. ನರಸೀಪುರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆರೋಪಿಸಿದ್ದಾರೆ. ಸಿಟಿ ರವಿ ನೇತೃತ್ವದ ಬಿಜೆಪಿ ಸತ್ಯಶೋಧನಾ ತಂಡ ವೇಣುಗೋಪಾಲ್ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಮೃತನ ಪತ್ನಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿತು. ವೇಣುಗೋಪಾಲ್ ಪತ್ನಿಗೆ ಸಿಟಿ ರವಿ 5 ಲಕ್ಷ ರೂಪಾಯಿ ಚೆಕ್ ನೀಡಿದರು. ನಂತರ ಮಾತನಾಡಿದ ಅವರು, ಇದೊಂದು ಪೂರ್ವನಿಯೋಜಿತ ಹತ್ಯೆ. 30 ಕಡೆ ಇರಿದಿದ್ದಾರೆ, ಶಸ್ತ್ರಾಸ್ತ್ರ ಬಳಸಿ ಕೊಲೆ ಮಾಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಇದುವರೆಗೂ ರಾಜ್ಯದ 16-17 ಕಡೆ ಈ ರೀತಿ ಘಟನೆಗಳು ನಡೆದಿವೆ ಎಂದು ದೂರಿದರು.
ವೇಣುಗೋಪಾಲ ನಾಯಕ್ ಹನುಮ ಜಯಂತಿ ನೇತೃತ್ವವಹಿಸಿದ್ದ ಕಾರಣ ಈ ಕೊಲೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಒಂದು ವರ್ಗದ ಜನ ಯುದ್ಧೋತ್ಸಹದಲ್ಲಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅರಾಜಕತೆ ಸ್ಥಿತಿ ಸೃಷ್ಟಿಯಾಗಿದೆ. ಹಿಂದೂ ಸಂಘಟನೆಗಳ ಚಟುವಟಿಕೆ ಹತ್ತಿಕುವ ಕೆಲಸವಾಗುತ್ತಿದೆ. ಸಂಘಟನಗಳ ಮುಖಂಡರಿಗೆ ಭಯ ಹುಟ್ಟಿಸುವ ಕೆಲಸ ನಡೆದಿದೆ. ಈ ಕ್ಷೇತ್ರದ ಶಾಸಕ ಡಾ. ಮಹದೇವಪ್ಪ ಕಡೆಯಿಂದ ಈ ಕುಟುಂಬಕ್ಕೆ ಒಂದು ಸಾಂತ್ವನದ ನುಡಿ ಕೂಡ ಬಂದಿಲ್ಲ. ಮುಖ್ಯಮಂತ್ರಿ ಕಡೆಯಿಂದಲ್ಲೂ ಸಾಂತ್ವನ ಬಂದಿಲ್ಲ. ಮುಖ್ಯಮಂತ್ರಿಗಳು ಈ ಹತ್ಯೆ ಬಗ್ಗೆ ತುಟಿ ಬಿಚ್ಚಿಲ್ಲ. ಸಿದ್ದರಾಮಯ್ಯ ಅವರಿಗೆ ಕೇಸರಿ ಕಂಡರೆ ಆಗದ ಮಾನಸಿಕತೆ ಇದೆ. ವೇಣುಗೋಪಾಲ ನಾಯಕ, ಕೇಸರಿಯ ನೇತೃತ್ವವಹಿಸಿ ಕೊಂಡವರಾದ ಕಾರಣ ಸಾಂತ್ವನ ಹೇಳಿಲ್ಲ ಎಂದು ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.