News Karnataka Kannada
Wednesday, May 01 2024
ಮೈಸೂರು

ಸಚಿವರ ಸ್ವಗ್ರಾಮದಲ್ಲಿಯೇ ದನದ ಕೊಟ್ಟಿಗೆಯಂತಿರುವ ಅಂಬೇಡ್ಕರ್ ವಸತಿ ಶಾಲೆ!

ಗಬ್ಬೆದ್ದು ನಾರುವ ಶೌಚಾಲಯ, ಮುರಿದು ಬಿದ್ದಿರುವ ಕಿಟಕಿ ಬಾಗಿಲುಗಳು, ಕೊಳೆತ ಆಹಾರ ಪದಾರ್ಥಗಳಿಂದ ಅಡುಗೆ ತಯಾರಿಕೆ, ಶುದ್ಧ ಕುಡಿಯುವ ನೀರಿಲ್ಲ, ವಿದ್ಯಾರ್ಥಿಗಳಿಗೆ ಭದ್ರತೆಗೆ ಇಲ್ಲ. ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
Photo Credit : NewsKarnataka

ನಂಜನಗೂಡು :  ಗಬ್ಬೆದ್ದು ನಾರುವ ಶೌಚಾಲಯ, ಮುರಿದು ಬಿದ್ದಿರುವ ಕಿಟಕಿ ಬಾಗಿಲುಗಳು, ಕೊಳೆತ ಆಹಾರ ಪದಾರ್ಥಗಳಿಂದ ಅಡುಗೆ ತಯಾರಿಕೆ, ಶುದ್ಧ ಕುಡಿಯುವ ನೀರಿಲ್ಲ, ವಿದ್ಯಾರ್ಥಿಗಳಿಗೆ ಭದ್ರತೆಗೆ ಇಲ್ಲ. ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಹೌದು.. ಬೇಜವಾಬ್ದಾರಿ ಆಡಳಿತ ನಡೆಸುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ದುರ್ವರ್ತನೆಯಿಂದ ವಸತಿ ಶಾಲೆಯ ಸ್ಥಿತಿ ಅದೋಗತಿಗೆ ತಲುಪಿ ಸ್ಮಶಾನ ಆವರಿಸಿದೆ.

ದನಗಳ ಕೊಟ್ಟಿಗೆಯಂತಿದೆ ಎಂಬುದಕ್ಕೆ ದೊಡ್ಡ ಉದಾಹರಣೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್. ಸಿ ಮಹದೇವಪ್ಪ ರವರ ಸ್ವಗ್ರಾಮ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ.

ಹೌದು.. ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಬರೋಬರಿ 150ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೆಸರಿಗೆ ಮಾತ್ರ ಅಂಬೇಡ್ಕರ್ ವಸತಿ ಶಾಲೆ‌‌. ಆದರೆ, ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕುಡಿಯಲು ನೀರಿಲ್ಲ , ಪಾಠ ಪ್ರವಚನ ಕೇಳಲು ಮತ್ತು ರಾತ್ರಿ ವೇಳೆಯಲ್ಲಿ ಮಲಗಲು ಕೊಠಡಿಗಳ ಸರಿಯಾದ ವ್ಯವಸ್ಥೆ ಇಲ್ಲ. ಮುರಿದು ಬಿದ್ದಿವೆ ಕಿಟಕಿಗಳು, ಬಾಗಿಲುಗಳು. 150 ವಿದ್ಯಾರ್ಥಿಗಳಿಗೆ ಕೇವಲ ಒಂದೇ ಶೌಚಾಲಯ ಮೂಗು, ಬಾಯಿ ಮುಚ್ಚಿಕೊಂಡೆ ಆ ಶೌಚಾಲಯದ ಒಳಗೆ ಪ್ರವೇಶ ಮಾಡಬೇಕು ಎಂಬ ದುಸ್ಥಿತಿ ಇದೆ.

ಇಲ್ಲಿ ಸಾಕಷ್ಟು ಹೆಣ್ಣುಮಕ್ಕಳೇ ವಿದ್ಯಾಭ್ಯಾಸ ಮಾಡುತ್ತಿರುವ ಈ ವಸತಿ ಶಾಲೆಯಲ್ಲಿ ಯಾವುದೇ ಮೂಲಭೂತ ಸೌಲಭ್ಯ ಸಿಗುತ್ತಿಲ್ಲ. ಕುಡಿಯುವ ನೀರಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿರುವುದನ್ನು ಕಂಡು ಪೋಷಕರೊಬ್ಬರು ವಿದ್ಯಾರ್ಥಿಗಳಿಗೆ ಬಾಟಲ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿದ್ದಾರೆ.

ಆದಿವಾಸಿಗಳಿಗಿಂತಲೂ ಹೀನಾಯ ಸ್ಥಿತಿ ಅನುಭವಿಸುತ್ತಿರುವ ವಿದ್ಯಾರ್ಥಿಗಳ ಪಾಡು ಹೇಳತೀರದು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಯಾವೊಂದು ನಿಯಮವು ಕೂಡ ಇಲ್ಲಿ ಪಾಲನೆಯಾಗುತ್ತಿಲ್ಲ. ಮೆನು ಚಾರ್ಟ್‌  ಪ್ರಕಾರ ಊಟ ನೀಡುತ್ತಿಲ್ಲ. ಆಹಾರ ಪದಾರ್ಥಗಳಲ್ಲಿ ಹುಳು ಬಂದಿದೆ. ಕೊಳೆತ ತರಕಾರಿಗಳನ್ನು ನಮಗೆ ಬೇಯಿಸಿ ಹಾಕುತ್ತಾರೆ. ಕಲುಷಿತ ನೀರಿನ ಸೇವನೆಯಿಂದ ನಮಗೆ ಅಲರ್ಜಿ ಬಂದಿದೆ ಎಂದು ಎನ್ನುತ್ತಾರೆ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು.

ರಾಷ್ಟ್ರ ನಾಯಕನ ಹೆಸರಿನಲ್ಲಿ 2017ರಲ್ಲಿ ಮಂಜೂರಾದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಇದುವರೆಗೂ ಸ್ವಂತ ಕೊಠಡಿಗಳ ಭಾಗ್ಯ ಕಂಡಿಲ್ಲ. ಮಕ್ಕಳಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳ ಅನುಕೂಲ ಅಲ್ಲಿ ಕಾರ್ಯನಿರ್ವಹಿಸುವ ಪ್ರಾಂಶುಪಾಲನ ಪಾಲಾಗುತ್ತಿದೆ ಎನ್ನುತ್ತಾರೆ ವಿದ್ಯಾರ್ಥಿಗಳ ಪೋಷಕರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೆ ಉಡಾಫೆಯಿಂದ ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಇನ್ನಾದರೂ ದಪ್ಪ ಚರ್ಮದ ಅಧಿಕಾರಿಗಳಿಗೆ ಚಾಟಿ ಬೀಸುವವರೇ ಕಾದು ನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು