ನಂಜನಗೂಡು : ಆಧುನಿಕ ಸಮಾಜದ ಅಂಗೈಯಲ್ಲಿ ಪ್ರಪಂಚವನ್ನು ನೋಡುವ ಮೊಬೈಲ್ ಯುಗದಲ್ಲಿಯೂ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ದೇಶದ ವಾಸಿಗಳ ಬದುಕು ಬದಲಾಗಿಲ್ಲ ಎಂಬುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಮೊಬ್ಬಳ್ಳಿ ಗ್ರಾಮದ ಗೇಟ್ ನಲ್ಲಿ ಬರೋಬರಿ 30 ವರ್ಷಗಳಿಂದ ವಾಸಿಸುವ ವೃದ್ಧ ಕುಟುಂಬಕ್ಕೆ ಕುಡಿಯಲು ನೀರಿಲ್ಲ ವಾಸಿಸಲು ಮನೆ ಇಲ್ಲ ಅಷ್ಟೇ ಏಕೆ ಸತ್ತರೆ ಕೊಡುವುದಕ್ಕೆ ಜಾಗವೇ ಇಲ್ಲ ಎಂದು ಕಣ್ಣೀರು ಇಡುತ್ತಿದ್ದಾರೆ.
ಅವರ ಕಣ್ಣೀರು ಒರೆಸುವ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಯಾಗಲಿ ಮುಂದಾಗದೆ ಇರುವುದು ದುರಂತದ ಸಂಗತಿ. ನಂಜನಗೂಡು ಹುಲ್ಲಹಳ್ಳಿ ಮುಖ್ಯರಸ್ತೆಯಲ್ಲಿರುವ ಮೊಬ್ಬಳ್ಳಿ ಗೇಟ್ ರಸ್ತೆಯ ಸಮೀಪವಿರುವ ಈ ಪುಟ್ಟ ಜೋಪಡಿಯಲ್ಲಿ ರಾಜಣ್ಣ ಎಂಬುವವರ ಕುಟುಂಬದ ಬರೋಬರಿ ಆರು ಮಂದಿ ವಾಸಿಸುತ್ತಿದ್ದಾರೆ. ಉಡುವ ಸೀರೆಯನ್ನು ಪರದೆಯಾಗಿ ಮಾಡಿಕೊಂಡು ಮಹಿಳೆಯರು ಸ್ನಾನ ಮಾಡುತ್ತಾರೆ. ಮನುಕುಲವನ್ನೇ ತಲೆತಗ್ಗಿಸುವಂತಹ ಹೀನಾಯ ಬದುಕು ಸಾಗಿಸುತ್ತಿರುವುದು ಕಣ್ಣಿಗೆ ಬಿದ್ದರೂ ಯಾರೊಬ್ಬರೂ ಕೂಡ ಇವರ ಬದುಕಿನ ಬದಲಾವಣೆಗೆ ಮುಂದಾಗಿಲ್ಲ.
ಮತದಾನದ ಸಂದರ್ಭದಲ್ಲಿ ಮತ ಹಾಕುತ್ತಾರೆ ಆಧಾರ್ ಕಾರ್ಡ್ ಜೊತೆಗೆ ಪಡಿತರ ಚೀಟಿಯು ಸಹ ಇದೆ ಆದರೆ ವಾಸದ ಮನೆ ಸೌಲಭ್ಯಕ್ಕಾಗಿ ಸಾಕಷ್ಟು ವರ್ಷಗಳಿಂದ ಅಂಗಲಾಚಿ ಬೇಡಿದರು ಸ್ಥಳೀಯ ಹೆಗ್ಗಡ ಹಳ್ಳಿ ಗ್ರಾಮ ಪಂಚಾಯಿತಿ ಮಾನವೀಯತೆ ದೃಷ್ಟಿಯಿಂದಾದರೂ ಕುಡಿಯಲು ನೀರನ್ನು ಸಹ ಕಲ್ಪಿಸಿಲ್ಲ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಬದುಕು ಸಾಗಿಸುವದರ ಬದಲಾಗಿ ಸರ್ಕಾರಿ ಅಧಿಕಾರಿಗಳೇ ನಮಗೆ ಒಂದು ತೊಟ್ಟು ವಿಷ ನೀಡಿದರೆ ಕಣ್ಮುಚ್ಚಿ ಮಲಗುತ್ತೇವೆ ಎನ್ನುತ್ತಾರೆ ನೊಂದ ವೃದ್ಧ ಕುಟುಂಬ.
ಮಾನವೀಯತೆ ಇಲ್ಲದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈಗಲಾದರೂ ಸ್ಪಂದಿಸಿ ವೃದ್ಧ ಕುಟುಂಬಕ್ಕೆ ಆಸರೆ ನೀಡುವವರೇ ಕಾದು ನೋಡಬೇಕಿದೆ.