ಮೈಸೂರು: ನಾಡ ಹಬ್ಬ ದಸರಾಕ್ಕೆ ಮೈಸೂರು ಸಜ್ಜಾಗುತ್ತಿದೆ. ಇಡೀ ನಗರ ದಸರಾ ಬೆಳಕಿನಲ್ಲಿ ಮಿಂದೇಳಲು ತಯಾರಾದಂತೆ ಗೋಚರಿಸುತ್ತಿದೆ, ಈಗಾಗಲೇ ಇಡೀ ನಗರಕ್ಕೆ ವಿದ್ಯುದ್ದೀಪ ಅಳವಡಿಸುವ ಕಾರ್ಯಗಳು ಜೋರಾಗಿಯೇ ನಡೆಯುತ್ತಿದೆ.
ಅ.15ರ ವೇಳೆಗೆ ವಿದ್ಯುದ್ದೀಪ ಅಳವಡಿಸುವ ಕಾರ್ಯ ಮುಗಿಯಲಿದ್ದು ಅಂದು ದಸರಾಕ್ಕೆ ಚಾಲನೆ ಸಿಗುವುದರೊಂದಿಗೆ ವಿದ್ಯುದ್ದೀಪದ ಅಲಂಕಾರಕ್ಕೂ ಅಧಿಕೃತ ಚಾಲನೆ ಸಿಗಲಿದೆ. ಆ ನಂತರ ಸಾಂಸ್ಕೃತಿಕ ನಗರಿ ಮೈಸೂರು ಥೇಟ್ ದೇವೇಂದ್ರನ ಅಮರಾವತಿಯೇ ಧರೆಗಿಳಿದು ಬಂದಂತೆ ಗೋಚರಿಸಲಿದೆ.
ಪ್ರತಿವರ್ಷವೂ ದಸರಾ ವೇಳೆ ವಿದ್ಯುತ್ ದೀಪದ ಬೆಳಕಿನಲ್ಲಿ ಮಿಂದೇಳುತ್ತಿರುವ ನಗರಿಯನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗುತ್ತಿದ್ದು, ಎಲ್ಲರ ಮೈಮನವನ್ನು ಪುಳಕಗೊಳಿಸುತ್ತಿದೆ. ಸಾಮಾನ್ಯವಾಗಿ ಹಬ್ಬ ಹರಿದಿನಗಳು ಬರುತ್ತಿದ್ದಂತೆಯೇ ಮೈಸೂರಿಗೆ ಮೈಸೂರೇ ಬದಲಾಗಿಬಿಡುತ್ತದೆ. ಇನ್ನು ದಸರಾದಲ್ಲಿ ಹೇಳಬೇಕೆ ಅದರ ಸಡಗರವೇ ಬೇರೆ.. ವರ್ಣಿಸಲು ಅಸಾಧ್ಯವಾಗಿ ಬಿಡುತ್ತದೆ.
ಈಗಾಗಲೇ ಐತಿಹಾಸಿಕ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ. ಕಾವೇರಿ ಕಾರ್ಮೋಡ, ಬರದ ಆತಂಕದ ನಡುವೆಯೂ ಅದೆಲ್ಲವನ್ನು ಮರೆತು ನಗರದ ಜನ ದಸರಾ ಸಡಗರದಲ್ಲಿ ಮೀಯುತ್ತಿದ್ದಾರೆ. ರೈತರು, ಮಹಿಳೆಯರು, ಯುವಕರು, ಯುವತಿಯರು ಹೀಗೆ ಎಲ್ಲರಿಗೂ ದಸರಾದಲ್ಲಿ ಪಾಲ್ಗೊಳ್ಳುವ, ಮಿಂಚುವ ಮಹಾಸಡಗರ. ಒಂದು ಕಡೆ ಯುವ ಮನಸ್ಸುಗಳಿಗೆ ಲಗ್ಗೆಯಿಡುವ ಯುವ ದಸರಾ ಮನ ತಣಿಸುತ್ತಿದ್ದರೆ ಮತ್ತೊಂದೆಡೆ ಬೋಜನ ಪ್ರಿಯರಿಗೆ ವಿವಿಧ ಖಾದ್ಯಗಳನ್ನು ಉಣಬಡಿಸುತ್ತಾ ಬಾಯಿ ಚಪ್ಪರಿಸುವಂತೆ ಅಹಾರ ಮೇಳ ಮಾಡಲಿದೆ.
ಇನ್ನು ಝಗಮಗಿಸುವ ಅರಮನೆ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಮಾಡುತ್ತಿದೆ. ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆಯುತ್ತಿವೆ. ಹಿಂದಿನ ರಾಜ ವೈಭವ ಮತ್ತೆ ಮರುಕಳಿಸಿದಂತೆ ಭಾಸವಾಗುತ್ತದೆ. ಜತೆಗೆ ನಿತ್ಯದ ಜಂಜಡವನ್ನು ಮರೆಯಿಸಿ ಒಂದು ಕ್ಷಣ ಮೈಮನ ಪುಳಕಿತವಾಗುವಂತೆ ಮಾಡಲಿದೆ. ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರುತ್ತಿರುವ ಜನ ಎಲ್ಲೆಡೆ ಸುತ್ತಾಡಿ ಕಣ್ತುಂಬಿಸಿಕೊಂಡು ಹೋಗಲಿದ್ದು, ನಗರದ ಅಲ್ಲಲ್ಲಿ ವೃತ್ತಗಳು, ರಸ್ತೆಗಳು, ಮರಗಳು, ಕಟ್ಟಡಗಳು ಸೇರಿದಂತೆ ಎಲ್ಲೆಡೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಅವು ಮಿನುಗುವಾಗ ಕಾಣುವ ದೃಶ್ಯ ಅದ್ಭುತ.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಸಾಗುವ ಮಾರ್ಗ ಸೇರಿದಂತೆ ಪ್ರಮುಖ ರಸ್ತೆಗಳು, ಅರಮನೆ ಸುತ್ತಮುತ್ತಲಿರುವ ಐದು ಪ್ರಮುಖ ವೃತ್ತಗಳಿಗೆ ಶಾಶ್ವತ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ.