ಮೈಸೂರು: ಮೈಸೂರು ವಸ್ತುಪ್ರದರ್ಶನವನ್ನು ಈ ಬಾರಿ ವಿಭಿನ್ನ ಹಾಗೂ ವಿಶಿಷ್ಟವಾಗಿ ಆಯೋಜಿಸಲು ತೀರ್ಮಾನಿಸಿರುವುದಾಗಿ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.26ರಿಂದ ಡಿ.12ರವರೆಗೆ 90 ದಿನಗಳ ಕಾಲ ನಡೆಯುವ ವಸ್ತುಪ್ರದರ್ಶನ ಜನಪರವಾಗಿರಲಿದೆ. ಹಿಂದೆಂದಿಗಿಂತಲೂ ವಿಭಿನ್ನ ಕಾರ್ಯಕ್ರಮಗಳನ್ನು ಈ ಬಾರಿ ಆಯೋಜಿಸಲಾಗಿದೆ. ಪುನೀತ್ ರಾಜ್ಕುಮಾರ್, ಆಜಾದಿ ಕಾ ಅಮೃತ ಮಹೋತ್ಸವದ ಥೀಮ್, ಪ್ರಧಾನಿ ನರೇಂದ್ರ ಮೋದಿ, ವೀರ ಸಾವರ್ಕರ್ ಸೇರಿದಂತೆ 7 ಕಲಾಕೃತಿಗಳ ಸ್ಯಾಂಡ್ ಮ್ಯೂಸಿಯಂ ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಯೋಗ 3ಡಿ ವಿಡೀಯೋ ಮ್ಯಾಪಿಂಗ್ ನಿರ್ಮಿಸಲಾಗುತ್ತಿದ್ದು, ಬಹುಮಾಧ್ಯಮ ಕಲಾ ಗ್ಯಾಲರಿಯನ್ನೂ ಉದ್ಘಾಟಿಸಲಾಗುವುದು ಎಂದರು.
ಡಿಜಿಟಲ್ ಆಪ್: ಸಾರ್ವಜನಿಕರಿಗೆ ವಸ್ತುಪ್ರದರ್ಶನದಲ್ಲಿನ ಮಳಿಗೆಗಳ ಮಾಹಿತಿ ನೀಡುವ ಸಲುವಾಗಿ ಡಿಜಿಟಲ್ ಆಪ್ ಸೌಲಭ್ಯ ಕಲ್ಪಿಸಲಾಗಿದೆ. ಟಿಕೆಟ್ ಕೌಂಟರ್ ಬಳಿ ಆಪ್ ಡೌನ್ಲೋಡ್ ಮಾಡಿಕೊಂಡು ವಸ್ತುಪ್ರದರ್ಶನದ ಸಂಪೂರ್ಣ ನಕ್ಷೆ ಹಾಗೂ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಕ್ರಮ ವಹಿಸಲಾಗುತ್ತದೆ. ವಯಸ್ಕರಿಗೆ 30, ಮಕ್ಕಳಿಗೆ 20 ರೂ ಪ್ರವೇಶದರ ನಿಗದಿಪಡಿಸಲಾಗಿದೆ ಎಂದರು.
ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ವತಿಯಿಂದ ಸಸಿಗಳು ಹಾಗೂ ಕೃಷಿ ಪರಿಕರಗಳನ್ನು ವಸ್ತುಪ್ರದರ್ಶನ ಪ್ರಾಧಿಕಾರದ ಮಳಿಗೆಗಳಲ್ಲಿ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ. ವಸ್ತುಪ್ರದರ್ಶನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಪ್ರಾಧಿಕಾರದ ವತಿಯಿಂದ ವ್ಯವಸ್ಥಿತವಾಗಿ ವಿತರಿಸಲು ಆರ್ಒ ಪ್ಲಾಂಟ್ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ವಸ್ತುಪ್ರದರ್ಶನ ಆವರಣದ ಸ್ವಚ್ಛತೆ ಕಾಪಾಡಲು ಕ್ರಮ ವಹಿಸಲಾಗಿದ್ದು, ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಿಸಲಾಗಿದೆ. ಮಾಹಿತಿ ಕೇಂದ್ರ, ಪೊಲೀಸ್ ಉಪಠಾಣೆ, ಅಗ್ನಿಶಾಮಕ ವಾಹನ ಹಾಗೂ ಪ್ರಥಮ ಚಿಕಿತ್ಸಾ ಘಟಕ ತೆರೆಯುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಎ ಮತ್ತು ಬಿ ಬ್ಲಾಕ್ ಮಳಿಗಗಳು, ಸಿಬ್ಲಾಕ್ ಮಳಿಗೆಗಳು, ತಿಂಡಿ ತಿನಿಸು ಮಳೆಗೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ದಸರಾ ವಸ್ತುಪ್ರದರ್ಶನದ ಅವಧಿಯಲ್ಲಿ ಈ ಬಾರಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖಾ ಮಳಿಗೆಗಳು, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖಾ, ವಾರ್ತಾ ಇಲಾಖೆ ಮತ್ತು ವಿಶೇಷ ಆಕರ್ಷಣೀಯ ಮಳಿಗೆಗಳಿರುತ್ತವೆ ಎಂದರು.
ಪ್ರತಿ ಬಾರಿಯೂ ಮಳೆ ಬಂದಾಗ ವಸ್ತುಪ್ರದರ್ಶನದ ಆವರಣ ನೀರಿನಿಂದ ತುಂಬಿರುತ್ತಿತ್ತು. ಇದರಿಂದಾಗಿ ಮಳಿಗೆದಾರರು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಪ್ರಾಧಿಕಾರದ ಹಿಂಭಾಗವಿರುವ ಚರಂಡಿಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿರಲಿಲ್ಲ. ಹೂಳನ್ನೆಲ್ಲ ತೆಗೆಸಿದ್ದು, ಮಳೆ ನೀರು ತುಂಬಿಕೊಳ್ಳುವುದಿಲ್ಲ. ಜತೆಗೆ ಆವರಣದಲ್ಲಿ ಕಾಂಕ್ರೀಟ್ ಹಾಕಿಸಲಾಗುವುದು. ಡಾಂಬರೀಕರಣವೂ ನಡೆಯುತ್ತಿದೆ ಎಂದು ಹೇಳಿದ್ದಾರೆ.