ಮೈಸೂರು: ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಬಹುಮತದ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಮಂಗಳೂರು, ಚಿಕ್ಕಮಗಳೂರು, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಮೂರು ಸುತ್ತು ಗೆಲ್ಲಿಸಿಕೊಟ್ಟಂತೆ ಮೈಸೂರು ಭಾಗದಲ್ಲೂ ಒಂದೇ ಬಾರಿಗೆ ನಾಲ್ಕು ಸುತ್ತಿನಷ್ಟು ಗೆಲ್ಲಿಸುವಂತೆ ಕೆಲಸ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಲಹೆ ನೀಡಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಮೈಸೂರು ವಿಭಾಗದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಲ್ಲಿ 2 ಸೀಟು, ಮಂಗಳೂರಲ್ಲಿ 7, ಚಿಕ್ಕಮಗಳೂರಲ್ಲಿ 5, ಉಡುಪಿಯಲ್ಲಿ ಐದು ಸೀಟುಗಳನ್ನು ಗೆದ್ದಿದ್ದೇವೆ. ಈಗ ಬಹುಮತ ದಾಟಬೇಕಾದರೆ ಮೈಸೂರು ಭಾಗದ ಕೊಡುಗೆ ಅಪಾರವಾಗಿದೆ. ಬಿಜೆಪಿ ಪೂರ್ಣ ಬಹುಮತ ಪಡೆಯಲು ಮೈಸೂರಿನಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದಕ್ಕೆ ಕಾರಣವಾಯಿತ್ತೆಂದು ಹೇಳುವಂತಾಗಬೇಕು ಎಂದು ಹೇಳಿದರು.
ನಮ್ಮ ನಾಯಕ ನರೇಂದ್ರ ಮೋದಿ ಚುನಾವಣಾ ರಂಗಕ್ಕೆ ಇಳಿದಿಲ್ಲ. ಆಗಲೇ ವಿವಿಧ ಸಮೀಕ್ಷೆಗಳು ಬಿಜೆಪಿಗೆ 103 ಸ್ಥಾನ ಸಿಗಲಿವೆ ಎಂದು ಹೇಳಿವೆ. ಅವರು ರಂಗಕ್ಕೆ ಇಳಿದ ಮೇಲೆ ಬಿಜೆಪಿಗೆ ಸಂಪೂರ್ಣ ಬಹುಮತ ಬರಲಿದೆ. ಕಾಂಗ್ರೆಸ್ 130 ಸೀಟು ಗೆಲ್ಲುತ್ತದೆಂದು ಹೇಳಿರುವ ಸರ್ವೇ ಸಂಸ್ಥೆಗಳ ಹೆಸರನ್ನೇ ನಾವು ಕೇಳಿಲ್ಲ. 2018ರಲ್ಲೂ ಕಾಂಗ್ರೆಸ್ 130 ಸೀಟು ಗೆಲ್ಲುತ್ತದೆಂದು ಸಮೀಕ್ಷೆಗಳು ಹೇಳಿದ್ದವು. ಆದರೆ, ಕಾಂಗ್ರೆಸ್ 79ಸ್ಥಾನ ಪಡೆಯಿತು ಎಂದು ಹೇಳಿದರು.
ಯಕ್ಷಗಾನ ಪ್ರದರ್ಶನದ ಆರಂಭದಲ್ಲಿ ಬಾಲಗೋಪಾಲರ ನೃತ್ಯ ಇದೆ. ಕರ್ನಾಟಕದ ಚುನಾವಣೆಯಲ್ಲಿ ಈಗ ಬಾಲ ಗೋಪಾಲರ ನೃತ್ಯ ನಡೆಯುತ್ತಿದೆ. ಇವರಿಗೆ 103 ಸ್ಥಾನ ಬರುತ್ತಿದೆ. ಏ. 29ರ ನಂತರ ಬಣ್ಣದ ವೇಷ ತೊಟ್ಟು ಯಜಮಾನರಾದ ನರೇಂದ್ರ ಮೋದಿ ರಂಗ ಪ್ರವೇಶ ಮಾಡಲಿದ್ದಾರೆ. ತದನಂತರ ಬಿಜೆಪಿಯ ಸ್ಥಾನಗಳು 113, 123, 133 ಸೀಟುಗಳನ್ನು ದಾಟಬಹುದು ಎಂದು ಹೇಳಿದರು.
ಹಾಗಂತ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ ಅವರಿಗೆ ಜವಾಬ್ದಾರಿ ಹಾಕದೇ ಸಂಪೂರ್ಣ ಬಹುಮತ ಬರುವ ತನಕ ವಿರಮಿಸುವುದಿಲ್ಲ. ನಮ್ಮೆಲ್ಲರ ಚಿತ್ತ ಸಂಪೂರ್ಣ ಬಹುಮತದತ್ತ ಎಂದು ಸಂಕಲ್ಪ ಮಾಡಬೇಕು. ಮೇ 10ರವರೆಗೆ ಶ್ರಮಪಟ್ಟರೆ ಮೇ 13ರಂದು ಖುಷಿ ಅನುಭವಿಸಬಹುದು ಎಂದು ಹೇಳಿದರು.
ಸಂಸದ ಪ್ರತಾಪಸಿಂಹ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮುನಿರಾಜುಗೌಡ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಸಾಮಾಜಿಕ ಜಾಲತಾಣದ ಸಂಚಾಲಕ ವಿಕಾಸ್, ಜಗದೀಶ್ ಹಿರೇಮನಿ ಮುಂತಾದವರು ಹಾಜರಿದ್ದರು.