ತಿ.ನರಸೀಪುರ: ಹೈ ವೋಲ್ಟೇಜ್ ಕ್ಷೇತ್ರವಾದ ವರುಣಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಲ್.ಎನ್.ಭಾರತೀ ಶಂಕರ್ ಘೋಷಣೆಯ ಹಿನ್ನೆಲೆಯಲ್ಲಿ ವರುಣಾ ಕ್ಷೇತ್ರದ ಜೆಡಿಎಸ್ ಮುಖಂಡರ ಮತ್ತು ಕಾರ್ಯಕರ್ತರ ಸಭೆಯನ್ನು ನಡೆಸಲಾಯಿತು.
ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರುಣಾ ಕ್ಷೇತ್ರದ ನೂತನ ಅಭ್ಯರ್ಥಿಯಾಗಿ ಆಯ್ಕೆಗೊಂಡ ಮಾಜಿ ಶಾಸಕ ಎಲ್.ಎನ್.ಭಾರತೀ ಶಂಕರ್ ಗೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿದರು.
ಜೆಡಿಎಸ್ ಅಭ್ಯರ್ಥಿ ಎಲ್.ಎನ್.ಭಾರತೀಶಂಕರ್ ಮಾತನಾಡಿ, ವರುಣಾ ಕ್ಷೇತ್ರಕ್ಕೆ ನನ್ನನ್ನುಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಜೆಡಿಎಸ್ ವರಿಷ್ಠರ ತೀರ್ಮಾನಕ್ಕೆ ಅಭಿನಂದನೆ ಸಲ್ಲಿಸಿದರು. ವರಿಷ್ಠರು ಯಾವುದೇ ಹೊಂದಾಣಿಕೆಗಾಗಿ ವರುಣಾ ಕ್ಷೇತ್ರದಲ್ಲಿ ನನ್ನನ್ನು ಕಣಕ್ಕಿಳಿಸಿಲ್ಲ. ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ಹಾಲಿ ವರುಣಾ ಕ್ಷೇತ್ರದಲ್ಲಿರುವ ಮೂರು ಹೋಬಳಿಗಳು ತಿ.ನರಸೀಪುರ ಕ್ಷೇತ್ರಕ್ಕೆ ಒಳಪಟ್ಟಿದ್ದವು. ಆ ಸಂದರ್ಭದಲ್ಲಿ ನಾನು ತಿ.ನರಸೀಪುರ ಕ್ಷೇತ್ರದಲ್ಲಿ ಗೆದ್ದು ಶಾಸಕನಾಗಿದ್ದೆ. ಹಾಗಾಗಿ ವರುಣಾ ಕ್ಷೇತ್ರಕ್ಕೆ ನಾನು ಚಿರಪರಿಚಿತ. ಬಿಜೆಪಿ ಅಭ್ಯರ್ಥಿ ಸೋಮಣ್ಣ ವರುಣಾ ಕ್ಷೇತ್ರಕ್ಕೆ ಅಪರಿಚಿತರು, ಸಿದ್ದರಾಮಯ್ಯರ ಕ್ಷೇತ್ರಗಳ ಕೊನೆ ಆಯ್ಕೆ ವರುಣಾ ಎಂದು ಟೀಕಿಸಿದರು.
ಅನ್ಯ ಪಕ್ಷಗಳು ವರುಣಾದಲ್ಲಿ ಜೆಡಿಎಸ್ ಪಕ್ಷವನ್ನು ಕಡೆಗಣಿಸುವಂತಿಲ್ಲ. ಕಳೆದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ 28ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದರು. ಈ ಚುನಾವಣೆಯಲ್ಲಿ ಎಲ್ಲ ಸಮುದಾಯದ ಮತದಾರರು ನನ್ನನ್ನು ಬೆಂಬಲಿಸುವ ಸಾಧ್ಯತೆಯಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ವಕ್ತಾರ ತಾಯಾರು ಪ್ರಕಾಶ್, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಯ್ಯ,ವಕೀಲ ಪಾಲಾಕ್ಷ, ಮಾಜಿ ಪಂ.ಪಂ .ಅಧ್ಯಕ್ಷ ವಿರೇಶ್, ಜೆಡಿಎಸ್ ಮುಖಂಡ ಕೆಂಪಯ್ಯನಹುಂಡಿ ಶಿವಪ್ರಸಾದ್, ಮಾಜಿ ಗ್ರಾಪಂ ಸದಸ್ಯ ಬೈರಾಪುರ ರಮೇಶ್, ಹಿಟ್ಟವಳ್ಳಿ ಮರಿದೇವಗೌಡ, ತಿರುಮಕೂಡಲು ಜಯರಾಮ್, ಕೆಂಪಯ್ಯನಹುಂಡಿ ಚನ್ನಪ್ಪಗೌಡ, ಸಿ.ಡಿ. ವೆಂಕಟೇಶ್, ವಾಟಾಳು ಗ್ರಾಪಂ ಸದಸ್ಯ ಬಸವರಾಜು, ಬಲ್ಲಯ್ಯ, ಹುಣಸೂರು ಮಹದೇವಸ್ವಾಮಿ, ಆಲಗೂಡು ಮಲ್ಲೇಶ್ ಇತರರು ಹಾಜರಿದ್ದರು.