ಮೈಸೂರು: ಮೈಸೂರು-ಕುಶಾಲನಗರ ಹೆದ್ದಾರಿ (ಎನ್ಎಚ್-275) ಕಾಮಗಾರಿಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭ ಮಾಡುವ ಜತೆಗೆ 2024ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲಾಗುತ್ತದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.
ಎನ್ಎಚ್-275 ಹೆದ್ದಾರಿ ಕಾಮಗಾರಿ ಕುರಿತು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಜನೆ ಅನುಷ್ಠಾನ ವ್ಯಾಪ್ತಿಗೆ ಬರುವ ನಾನಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು-ಕುಶಾಲನಗರದ ನಡುವೆ 93 ಕಿ.ಮೀ ಅಕ್ಸಸ್ ಕಂಟ್ರೋಲ್ಡ್ ಹೈವೇ ಯೋಜನೆ ಇದಾಗಿದೆ. ಹೆದ್ದಾರಿಯನ್ನು 4,130 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಿಂದ ಆರಂಭವಾಗಲಿದೆ. ಈ ಯೋಜನೆಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಗುದ್ದಲಿಪೂಜೆ ನೆರವೇರಿಸಿದ್ದಾರೆ ಎಂದರು.
ನಾಲ್ಕು ಹಂತದ ಕಾಮಗಾರಿಯನ್ನು 3 ಜನ ಗುತ್ತಿಗೆದಾರರು ವಹಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ಭೂ ಸ್ವಾದೀನ ಪ್ರಕ್ರಿಯೆ, ನೀರು, ವಿದ್ಯುತ್, ನಾಲೆ ಮುಂತಾದವುಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಭಾಗಶಃ ಮುಗಿಸಿದ್ದೇವೆ ಎಂದರು.
ಈ ತಿಂಗಳಾಂತ್ಯದಲ್ಲಿ ಎಲ್ಲ ಅನುಮತಿ ಪಡೆಯಲಾಗುತ್ತದೆ. ಬೇಸ್ ಕ್ಯಾಂಪ್ಗಳನ್ನು ನಿರ್ಮಿಸಲಾಗುತ್ತಿದೆ. ಭೂಸ್ವಾದೀನ ಪ್ರಕ್ರಿಯೆಗಳನ್ನು ಈ ತಿಂಗಳ 30ರೊಳಗೆ ಮುಕ್ತಾಯಗೊಳಿಸಲು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸೆಪ್ಟಂಬರ್ ಮೊದಲ ವಾರದಲ್ಲಿ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಲಿದ್ದು ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳ ಕಾಲಾವಕಾಶವಿದೆ. ಐದು ಹಂತಗಳಲ್ಲಿ ನಡೆಯುವ ಈ ಕಾಮಗಾರಿಯನ್ನು ಮೂವರು ಗುತ್ತಿಗೆದಾರರು ಪೂರೈಸಲಿದ್ದಾರೆ. ನಾನು ಈ ಕಾಮಗಾರಿಯನ್ನು ಸವಾಲಾಗಿ ತೆಗೆದುಕೊಂಡಿದ್ದು 2024 ಡಿಸೆಂಬರ್ ಒಳಗೆ ಕೆಲಸ ಮುಕ್ತಾಯಗೊಳಿಸಿ ರಸ್ತೆಯನ್ನು ಲೋಕಾರ್ಪಣೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಯೋಜನೆಯಿಂದ ಹುಣಸೂರು, ಪಿರಿಯಾಪಟ್ಟಣ, ನಾಗರಹೊಳೆ, ಕೇರಳಕ್ಕೆ ತೆರಳುವವರು ಅನಾವಶ್ಯಕವಾಗಿ ಮೈಸೂರು ನಗರದ ಒಳಗೆ ಪ್ರವೇಶಿಸುವುದು ತಪ್ಪುತ್ತದೆ. ಇದೀಗ ಕೈಗಾರಿಕೆಗಳು ನಂಜನಗೂಡು ಭಾಗಕ್ಕೆ ಬೆಳವಣಿಗೆ ಹೊಂದಿದೆ. ಹೆದ್ದಾರಿ ನಿರ್ಮಾಣದಿಂದ ಬಿಳಿಕೆರೆ, ಹುಣಸೂರು, ಪಿರಿಯಾಪಟ್ಟಣ ಭಾಗಕ್ಕೂ ಕೈಗಾರಿಕೆಗಳು ವಿಸ್ತರಣೆಗೊಂಡು ಈ ಭಾಗದ ಮಕ್ಕಳಿಗೆ ಉದ್ಯೋಗಾವಕಾಶ ದೊರೆಯಲಿದೆ. ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.
ಗುತ್ತಿಗೆದಾರರಿಗೆ ನೀಡಬೇಕಿದ್ದ 6 ಕೋಟಿ ರೂ. ಬಾಕಿ ಹಣ ನೀಡದ ಹಿನ್ನೆಲೆಯಲ್ಲಿ ಅಂತಿಮ ಹಂತದ ಕಾಮಗಾರಿ ಪೂರ್ಣಗೊಳ್ಳದೇ ಕತ್ತಲಲ್ಲಿದ್ದ ರಿಂಗ್ ರಸ್ತೆಗೆ ಮತ್ತೆ ಬೆಳಕು ದೊರೆತಿದೆ. ಮುಡಾ ವತಿಯಿಂದ ಬಾಕಿ ಹಣವನ್ನು ನೀಡಲಾಗಿದೆ. ಹೀಗಾಗಿ ಸಮಸ್ಯೆ ಬಗೆಹರಿದಿದ್ದು ಇನ್ನು ಮುಂದೆ ನಿರಂತರವಾಗಿ ರಿಂಗ್ ರಸ್ತೆಯಲ್ಲಿ ಬೆಳಕು ಬರಲಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಯೋಜನೆಯ ಭೂ ಸ್ವಾಧೀನ ಅಧಿಕಾರಿ ಹರ್ಷವರ್ಧನ್ ಇತರರಿದ್ದರು.