ನಂಜನಗೂಡು: ಹುಲಿದಾಳಿಗೆ ರೈತನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಡಿಯಾಲ ಸಮೀಪದ ಹಾದನೂರ ಒಡೆಯನಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಒಡೆಯನಪುರ ಗ್ರಾಮದ ಪುಟ್ಟಸ್ವಾಮಿ (46) ಹುಲಿ ದಾಳಿಗೆ ಬಲಿಯಾದ ದುರ್ದೈವಿ. ಒಡಯನಪುರ ಗ್ರಾಮವು ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಡಂಚಿಗೆ ಸೇರಿದ್ದು, ಇಲ್ಲಿ ಸಾಮಾನ್ಯವಾಗಿ ಚಿರತೆ ಮತ್ತು ಹುಲಿಗಳ ಹಾವಳಿ ಜಾಸ್ತಿಯಿದೆ. ಈ ನಡುವೆ ಎಂದಿನಂತೆ ಪುಟ್ಟಸ್ವಾಮಿ ಅವರು ತಮಗೆ ಸೇರಿದ ದನಗಳನ್ನು ನಂಜದೇವರ ಬೆಟ್ಟದ ಬಳಿಯಿರುವ ತಮ್ಮ ಜಮೀನಿನಲ್ಲಿ ಮೇಯಿಸುತ್ತಿದ್ದರು ಎನ್ನಲಾಗಿದೆ.
ಈ ವೇಳೆ ತಂಬಾಕು ಬೆಳೆ ಬೆಳೆದಿದ್ದ ಜಮೀನಿನಲ್ಲಿ ಅಡಗಿ ಕುಳಿತಿದ್ದ ಹುಲಿ ಹೊಂಚು ಹಾಕಿ ದನ ಮೇಯಿಸುತ್ತಿದ್ದ ಪುಟ್ಟಸ್ವಾಮಿ ಅವರ ಮೇಲೆ ಏಕಾಏಕಿ ದಾಳಿ ಮಾಡಿದೆ. ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಹುಲಿ ಒಂದು ಜಾನುವಾರುವನ್ನೂ ಕೂಡ ಸಾಯಿಸಿದೆ.
ಘಟನೆ ಬಳಿಕ ಹಾದನೂರ ಒಡೆಯನಪುರ ಗ್ರಾಮದ ರೈತರು ಅರಣ್ಯ ಇಲಾಖೆ ವಿರುದ್ಧ ರೊಚ್ಚಿಗೆದ್ದಿದ್ದು, ಹೆಡಿಯಾಲ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಮತ್ತೊಂದೆಡೆ ಘಟನೆ ವಿಚಾರ ತಿಳಿಯುತ್ತಿದ್ದಂತೆಯೇ ಕ್ಷೇತ್ರದ ಶಾಸಕ ಬಿ.ಹರ್ಷವರ್ಧನ್ ಅವರು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ವೈಯಕ್ತಿಕ ಧನ ಸಹಾಯವನ್ನು ಪಕ್ಷದ ಕಾರ್ಯಕರ್ತರ ಮೂಲಕ ಮೃತರ ಕುಟುಂಬದ ಮನೆಗೆ ತಲುಪಿಸಲು ಸೂಚಿಸಿದ್ದಾರೆ.