ಹೆಚ್.ಡಿ.ಕೋಟೆ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೊಬ್ಬರು ಮನೆಯಲ್ಲಿದ್ದ ಇಲಿ ಪಾಷಾಣ ತಿಂದು ಆತ್ಮಹತ್ಯೆಗೆ ಶರಣಾದ ಘಟನೆ ಹೆಚ್.ಡಿ.ಕೋಟೆ ತಾಲೂಕು ಮಚ್ಚೂರು ಗ್ರಾಮದಲ್ಲಿ ನಡೆದಿದೆ.
ಜ್ಯೋತಿ (22) ಆತ್ಮಹತ್ಯೆ ಮಾಡಿಕೊಂಡಾಕೆ. ಈಕೆಯನ್ನು ನಾಲ್ಕು ವರ್ಷದ ಹಿಂದೆ ಮಚ್ಚೂರು ಗ್ರಾಮದ ಆನಂದನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಈ ಮದುವೆಯನ್ನು ಜ್ಯೋತಿ ಮನೆಯವರ ವಿರೋಧದ ನಡುವೆ ಆಗಿದ್ದಳು ಎನ್ನಲಾಗಿದೆ. ಮದುವೆ ವೇಳೆ ಚಿನ್ನಾಭರಣಗಳನ್ನು ಕೊಂಡೊಯ್ದಿದ್ದಳು. ಮದುವೆ ನಂತರ ಜ್ಯೋತಿಯನ್ನು ತವರು ಮನೆಗೆ ಹೋಗಲು ಬಿಡದೆ ಗಂಡ ಆನಂದ ಮತ್ತು ಮನೆಯವರು ಕಿರುಕುಳ ನೀಡುತ್ತಿದ್ದರು.
ತವರು ಮನೆಯಿಂದ ವರದಕ್ಷಿಣೆ ತರುವಂತೆಯೂ ಒತ್ತಡ ಹೇರುತ್ತಿದ್ದರು. ಆದರೆ ತಾನೇ ಇಷ್ಟಪಟ್ಟು ಮದುವೆಯಾದ ಗಂಡ ತನಗೆ ಹಿಂಸೆ ನೀಡುತ್ತಿದ್ದಾನೆ ಎನ್ನುವುದನ್ನು ತವರಿನವರೊಂದಿಗೆ ಹೇಳಿಕೊಳ್ಳಲಾಗದೆ ಕಿರುಕುಳ ಅನುಭವಿಸಿಕೊಂಡೇ ಆಕೆ ಇಲ್ಲಿವರೆಗೆ ಬಂದಿದ್ದಳು. ವರದಕ್ಷಿಣೆ ತರುವವರೆಗೂ ತವರು ಮನೆಗೆ ಭೇಟಿ ನೀಡದಂತೆ ಎಚ್ಚರಿಕೆ ನೀಡಿದ್ದರು. ಹೀಗಾಗಿ ಮಗಳು ತವರಿಗೆ ಬಾರದೆ ಇದ್ದಾಗ ಹೆತ್ತವರೇ ಅವಳನ್ನು ನೋಡಲು ಹೋದರೆ ಅವಮಾನ ಮಾಡಿ ಕಳುಹಿಸಿದ್ದರು.
ಮೇಲಿಂದ ಮೇಲೆ ಕಿರುಕುಳ ಅನುಭವಿಸುತ್ತಾ ಬಂದಿದ್ದ ಜ್ಯೋತಿ ಇನ್ಮುಂದೆ ಸಹಿಸಿಕೊಳ್ಳಲಾಗದ ಸ್ಥಿತಿಯನ್ನು ತಲುಪಿದ್ದಳು. ಹೀಗಾಗಿ ನೊಂದ ಆಕೆ ಮನೆಯಲ್ಲಿದ್ದ ಇಲಿಪಾಷಣವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಕೇರಳದ ಕ್ಯಾಲಿಕಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಜ್ಯೋತಿ ಆತ್ಮಹತ್ಯೆಗೆ ಪತಿ ಆನಂದ ಮನೆಯವರಿಂದ ಪ್ರಚೋದನೆ ಆರೋಪ ಕೇಳಿಬಂದಿರುವುದರಿಂದ ಜ್ಯೋತಿ ಪೋಷಕರು ಅಂತರಸಂತೆ ಪೊಲೀಸ್ ಠಾಣೆಗೆ ಗಂಡ ಮತ್ತು ಆತನ ಮನೆಯವರ ವಿರುದ್ಧ ದೂರು ನೀಡಿದ್ದಾರೆ.
ಸಹಾಯವಾಣಿಗೆ ಕರೆ ಮಾಡಿ:
ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು