ನಂಜನಗೂಡು: ನೀರಿನಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಸಮೀಪದಲ್ಲಿರುವ ಹತ್ವಾಳ್ ಕಟ್ಟೆಯಲ್ಲಿ ಇಂದು ಶನಿವಾರ ನಡೆದಿದೆ.
ನಂಜನಗೂಡು ತಾಲ್ಲೂಕಿನ ಮಲ್ಕುಂಡಿ ಗ್ರಾಮದ ನಂದೀಶ್ ಎಂಬುವವರ ಪುತ್ರ 20 ವರ್ಷದ ವಿನಯ್ ಮೃತ ದುರ್ದೈವಿಯಾಗಿದ್ದಾನೆ.
ಯುವಕನೊಂದಿಗೆ ತೆರಳಿದ ನಾಲ್ವರ ವಿರುದ್ಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏಪ್ರಿಲ್ 4 ರಂದು ಮಲ್ಕುಂಡಿ ಗ್ರಾಮದಲ್ಲಿ ಪೂಜೆ ಮಾಡುವ ವಿಚಾರಕ್ಕೆ ಗಲಾಟೆ ನಡೆದಿತ್ತು. ಇದಕ್ಕೆ ಗ್ರಾಮದಲ್ಲಿ ನ್ಯಾಯ ಪಂಚಾಯಿತಿಯನ್ನು ಮಾಡಲಾಗಿತ್ತು.
ಆದರೆ, ಶನಿವಾರ ವಿನಯ್ ಎಂಬಾತನನ್ನು ತನ್ನ ನಾಲ್ವರು ಸ್ನೇಹಿತರು ಬೈಕ್ ನಲ್ಲಿ ಹತ್ವಾಳ್ ಕಟ್ಟೆಗೆ ಕರೆದುಕೊಂಡು ಹೋಗಿದ್ದಾರೆ. ಸೋಮಶೇಖರ್, ಮನು, ದಿನೇಶ್, ವಿಜಯ್ ಎಂಬುವವರು ನನ್ನ ಮಗನಾದ ವಿನಯ್ ನನ್ನು ನೀರಿಗೆ ತಳ್ಳಿ ಸಾಯಿಸಿದ್ದಾರೆ ಎಂದು ನಾಲ್ವರ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಮೃತ ಯುವಕನ ತಂದೆ ನಂದೀಶ್ ದೂರು ನೀಡಿದ್ದಾರೆ.
ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊರ್ವ ಯುವಕ ನಾಪತ್ತೆಯಾಗಿದ್ದಾನೆ.
ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.