ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ಅರಣ್ಯ ವಲಯದಲ್ಲಿ ಹುಲಿಯೊಂದಿಗೆ ನಡೆದ ಕಾದಾಟದಲ್ಲಿ ಗಾಯಗೊಂಡಿದ್ದ ಹೆಣ್ಣು ಹುಲಿಯನ್ನು ಮೃಗಾಲಯದ ಸಿಬ್ಬಂದಿ ಸಹಾಯದಿಂದ ಸೆರೆಹಿಡಿದು ಚಿಕಿತ್ಸೆ ನೀಡಿದ ಘಟನೆ ನಡೆದಿದೆ.
ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ಗಾಯಗೊಂಡಿದ್ದ ಹೆಣ್ಣು ಹುಲಿಯೊಂದು ಓಡಾಡುತ್ತಿರುವುದನ್ನು ಅರಣ್ಯ ಇಲಾಖೆ ಸಿಬ್ಬಂದಿ ಗಮನಿಸಿದ್ದರು. ಸಿಬ್ಬಂದಿ ತಕ್ಷಣ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ನಂತರ, ಈ ಹುಲಿ ಸಫಾರಿ ಪ್ರದೇಶದಲ್ಲಿ ಮತ್ತೆ ಕಾಣಿಸಿಕೊಂಡಿತು. ಈ ವೇಳೆ ಹುಲಿಯ ಮುಂಭಾಗದ ಕಾಲಿನಲ್ಲಿ ಗಾಯದಿಂದಾಗಿ ನಡೆಯಲು ಕಷ್ಟಪಡುತ್ತಿತ್ತ. ಬಳಿಕ ಡಿ.ಬಿ.ಕುಪ್ಪೆಯ ಕಬಿನಿ ಹಿನ್ನೀರಿನ ಬಳಿ ಇಲಾಖೆ ಆನೆ ಅರ್ಜುನನನ್ನು ಬಳಸಿಕೊಂಡು ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಗಾಯಗೊಂಡ ಹುಲಿಯನ್ನು ಪಶುವೈದ್ಯರ ಸಹಾಯದಿಂದ ಅರಿವಳಿಕೆ ನೀಡಿ ಹುಲಿ ಸೆರೆಹಿಡಿಯಲಾಯಿತು. ಬಳಿಕ ಚಿಕಿತ್ಸೆಯ ನಂತರ, ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡುಗಡೆ ಮಾಡಲಾಯಿತು. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾದಾಟದ ಸಮಯದಲ್ಲಿ, ಹುಲಿಯ ಬಲಗಾಲಿಗೆ ಗಾಯವಾಗಿದೆ. ಈ ಕಾರಣದಿಂದಾಗಿ, ಹುಲಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಈಗ ಅದನ್ನು ಉಪಚರಿಸಿ ಕಾಡಿಗೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್.ಮೂರ್ತಿ, ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ರಮೇಶ್, ಪಶುವೈದ್ಯ ರಮೇಶ್, ಆರ್ಎಫ್ಒಗಳಾದ ಸಿದ್ದರಾಜು, ಹರ್ಷಿತ್ ಮತ್ತಿತರರು ಕಾರ್ಯಾಚರಣೆ, ಉಪಚಾರದಲ್ಲಿ ಪಾಲ್ಗೊಂಡಿದ್ದರು.
“ಹುಲಿ ಗಾಯಗೊಂಡಿರುವುದನ್ನು ನಮ್ಮ ಸಿಬ್ಬಂದಿ ಗಮನಿಸಿದ್ದಾರೆ. ಹುಲಿಯು ಸಫಾರಿ ವಲಯದಲ್ಲಿಯೂ ಕಾಣಿಸಿಕೊಂಡಿತ್ತು ಮತ್ತು ನಡೆಯಲು ಹೆಣಗಾಡುತ್ತಿತ್ತು. ನಾವು ಈ ಬಗ್ಗೆ ಚರ್ಚಿಸಿ ಅದಕ್ಕೆ ಕಾಡಿನಲ್ಲಿ ಚಿಕಿತ್ಸೆ ನೀಡಿ ಮತ್ತೆ ಕಾಡಿಗೆ ಬಿಡಲಾಗಿದೆ ಎಂದು ನಾಗರಹೊಳೆ ಡಿಸಿಎಫ್ ಹರ್ಷಕುಮಾರ ಚಿಕ್ಕನರಗುಂದ ತಿಳಿಸಿದ್ದಾರೆ.