ಮೈಸೂರು: ಹೈವೇ ನಿರ್ಮಾಣ ವಿಚಾರದಲ್ಲಿ ಪ್ರತಾಪ್ ಸಿಂಹ ಬುರುಡೆ ಬಿಡುತ್ತಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಾಗ್ದಾಳಿ ನಡೆಸುವ ಮೂಲಕ ಬೆಂಗಳೂರು-ಮೈಸೂರು ನಡುವಿನ ದಶಪಥ ರಸ್ತೆ ನಿರ್ಮಾಣ ಕ್ರೆಡಿಟ್ ವಾರ್ ಮುಂದುವರೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಹೆದ್ದಾರಿ ಆಗಿದ್ದಾಗ ಪ್ರತಾಪ್ ಸಿಂಹ ಸಂಸದನೇ ಆಗಿರಲಿಲ್ಲ. ಯುಪಿಎ ಸರ್ಕಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಘೋಷಣೆ ಆಗಿತ್ತು. ರಾಷ್ಟ್ರೀಯ ಹೆದ್ದಾರಿ ಘೋಷಣೆಯಾದಾಗಲೂ ಪ್ರತಾಪ್ಸಿಂಹ ಸಂಸದ ಆಗಿರಲಿಲ್ಲ. ಆದರೆ, ರಾಷ್ಟ್ರೀಯ ಹೆದ್ದಾರಿ ಘೋಷಣೆಯಾದ ಮೇಲೆ ಅದನ್ನು ಮಾಡುವುದು ಸರ್ಕಾರದ ಕೆಲಸ ಅಲ್ಲವೇ? ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇವರಿಗೆ ಇನ್ಚಾರ್ಜ್ ಕೊಟ್ಟಿದ್ದರೆ ಅಥವಾ ಡಿಪಿಆರ್ ಮಾಡಿಕೊಡಲು ಕೇಳಿದ್ದರೆ? ಎಂದು ಪ್ರಶ್ನಿಸಿದರು.
ಒಂದು ಯೋಜನೆ ತಯಾರಾಗಲು ರಾಜ್ಯ ಸರ್ಕಾರಗಳು ಪ್ರಸ್ತಾಪ ಸಲ್ಲಿಸಿ ಹಲವು ಹಂತಗಳ ನಂತರ ಹೆದ್ದಾರಿ ಆಗುತ್ತದೆ. ಆದರೆ ಆಗ ಇವರು ಎಂಪಿ ಆಗಿರಲಿಲ್ಲ. ಕೆಲಸ ಮಾಡಿದ್ದರೆ ಖಂಡಿತ ಅಭಿನಂದನೆ ಸಲ್ಲಿಸುತ್ತೇನೆ. ಸುಮ್ಮನೆ ಬುರುಡೆ ಬಿಡುವ ಕೆಲಸ ಮಾಡಬಾರದು. ಹೀಗಾಗಿ ಅವರ ಹೇಳಿಕೆಗೆ ಆದ್ಯತೆ ಕೊಡಬಾರದು. ಹೈವೇ ರಸ್ತೆಯಲ್ಲಿ ನೀರು ತುಂಬಿಕೊಂಡಾಗ ಅದನ್ನು ನೋಡಲು ಇವರು ಏಕೆ ಹೋಗಿದ್ದರು. ಪ್ರವಾಹ ಬಂದರೆ ಎಲ್ಲರೂ ಹೋಗುತ್ತಾರೆ. ಹಾಗೆಂದು ನೀರಲ್ಲಿ ಬಿದ್ದು ನಾನೇ ಮರ, ಜನಗಳನ್ನು ರಕ್ಷಣೆ ಮಾಡಿದ್ದು ಎಂದರೆ ಹೇಗೆ? ಪ್ರತಾಪ್ಸಿಂಹ ಏನು ಮೇಸ್ತ್ರಿಯೇ, ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಸರಿಸಮನಾದ ನಾಯಕನೇ? ಎಂದು ಟೀಕಿಸಿದರು.
ನೂತನ ವರ್ಷಾಚರಣೆ ಸಮೀಪಿಸುತ್ತಿದ್ದಂತೆ ಕೊರೊನಾ ಸೋಂಕು ಹೆಚ್ಚುತ್ತಿದೆ, ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ಕ್ರಮಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಕೊರೊನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಾಜ್ಯ ತಾಂತ್ರಿಕ ಸಲಹಾ ಸಮಿತಿ ಮಹತ್ವದ ಸಭೆ ನಡೆಸಲಾಗಿದೆ. ಆರೋಗ್ಯಾಧಿಕಾರಿಗಳೊಂದಿಗೆ ಸಿಎಂ ಮಹತ್ವದ ಸಭೆ ನಡೆಸಿದ್ದಾರೆ. ಕೋವಿಡ್ ಸೋಂಕು ಹರಡದಂತೆ ತಡೆಯುವ ಸಂಬಂಧ ಆರೋಗ್ಯಾಧಿಕಾರಿಗಳೊಂದಿಗೆ ಸಿಎಂ ಚರ್ಚಿಸಿದ್ದು, ಕೋವಿಡ್ ತಡೆಗಟ್ಟುವ ಸಂಬಂಧ ಕೆಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.