ಮೈಸೂರು: ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಕಾರಣ ಜಲಾಶಯಗಳು ಬರಿದಾಗಿವೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ನೀರಿನ ಅಭಾವ ತಲೆದೋರುವ ಜಿಲ್ಲೆಯ 102 ಗ್ರಾಮಗಳನ್ನು ಜಿಲ್ಲಾಡಳಿತ ಪಟ್ಟಿ ಮಾಡಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.
ಕಾಲೇರಿ ಜಲಾನಯನ ಪ್ರದೇಶದಲ್ಲಿ ಸೂಕ್ತ ಮಳೆಯಾಗದ್ದರಿಂದ ಕೆಆರ್ಎಸ್, ಕಬಿನಿ ಸೇರಿದಂತೆ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲವಾದರೂ ಬೇಸಿಗೆ ಆರಂಭವಾದರೆ ನೀರಿನ ಅಭಾವ ಕಾಡಲಿದೆ. ಮುಂದಿನ ಮೇ-ಜೂನ್ ತಿಂಗಳವರೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಅಗುವುದಿಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದರೂ, 102 ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಬಹುದು ಎಂದೂ ವರದಿಯಲ್ಲಿ ತಿಳಿಸಿದ್ದಾರೆ.
ಎಚ್.ಡಿ.ಕೋಟೆ ತಾಲೂಕಿನ 11, ಹುಣಸೂರು ತಾಲೂಕಿನ 15, ಪಿರಿಯಾಪಟ್ಟಣ ತಾಲೂಕಿನ 15, ಸರಗೂರು ತಾಲೂಕಿನ 2, ಕೆ.ಆರ್.ನಗರ ತಾಲೂಕಿನ 18, ಸಾಲಿಗ್ರಾಮ ತಾಲೂಕಿನ 19, ಮೈಸೂರು ತಾಲೂಕಿನ 6, ನಂಜನಗೂಡು ತಾಲೂಕಿನ 10, ತಿ.ನರಸೀಪುರ ತಾಲೂಕಿನ 6 ಗ್ರಾಮಗಳು ಸೇರಿದಂತೆ ಒಟ್ಟು 102 ಗ್ರಾಮಗಳು ಪಟ್ಟಿಯಲ್ಲಿವೆ. ಕೆಆರ್ಎಸ್, ಕಬಿನಿ, ನುಗು, ತಾರಕ ಹಾಗೂ ನೆರೆ ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ಸದ್ಯಕ್ಕೆ ಇರುವ ನೀರಿನ ಸಂಗ್ರಹ ಪ್ರಮಾಣದಿಂದ ಕುಡಿಯುವ ನೀರಿಗೆ ತೊಂದರೆ ಇಲ್ಲ ಎನ್ನಲಾಗಿದೆ. ಹೀಗಾಗಿಯೇ ಮೈಸೂರು, ಬೆಂಗಳೂರು ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಬಹುದೆಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನದಲ್ಲಿ ಇದ್ದ ಆತಂಕ ದೂರವಾಗಿದೆ.
ನಗರದಲ್ಲಿ ಇತ್ತೀಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ಮುಂದಿನ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಹಿಂಗಾರು ಮಳೆ ಕೈ ಹಿಡಿದರೆ ಸೆಪ್ಟಂಬರ್ವರೆಗೂ ಕುಡಿಯುವ ನೀರು ಕೊಡಬಹುದು ಎಂದು ಮಾಹಿತಿ ನೀಡಿದ್ದಾರೆ.
ನೀರಿನ ಎದುರಾಗಬಹುದಾದ 102 ಗ್ರಾಮಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಹೆಚ್ಚು ನೀರು ಬರುವ 93 ಬೋರ್ವೆಲ್ಗಳನ್ನು ಪಟ್ಟಿ ಮಾಡಲಾಗಿದ್ದು, ಎಚ್.ಡಿ.ಕೋಟೆ ತಾಲೂಕಿನ 11, ಹುಣಸೂರು ತಾಲೂಕಿನ 12, ಪಿರಿಯಾಪಟ್ಟಣ ತಾಲೂಕಿನ 15, ಸರಗೂರು ತಾಲೂಕಿನ 1, ಕೆ.ಆರ್.ನಗರ ತಾಲೂಕಿನ 13, ಸಾಲಿಗ್ರಾಮ ತಾಲೂಕಿನ 18, ಮೈಸೂರು ತಾಲೂಕಿನ 7, ನಂಜನಗೂಡು ತಾಲೂಕಿನ 10, ತಿ.ನರಸೀಪುರ ತಾಲೂಕಿನ 6 ಸೇರಿ ಒಟ್ಟು 93 ಬೋರ್ವೆಲ್ಗಳನ್ನು ಬಳಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಮೈಸೂರು, ಬೆಂಗಳೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಪ್ರತಿನಿತ್ಯ ಕುಡಿಯುವ ನೀರಿಗೆ 5 ಸಾವಿರ ಕ್ಯೂಸೆಕ್ ನೀರು ಬಳಸಿಕೊಳ್ಳಲಾಗುತ್ತಿದೆ. ಬರಗಾಲ ಕಾಡುತ್ತಿರುವುದರಿಂದ ಕಬಿನಿ ಮತ್ತು ಕೆಆರ್ಎಸ್ ಜಲಾಶಯದ ವ್ಯಾಪ್ತಿಗೆ ಬರುವ ಅಚ್ಚುಕಟ್ಟು ಪ್ರದೇಶಗಳಲ್ಲಿ ಬೆಳೆದು ನಿಂತಿದ್ದ ಫಸಲುಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗಿದೆ. ಮತ್ತೆ ಭತ್ತದ ಬೆಳೆಯಲು ನೀರು ಬಿಡುತ್ತಿಲ್ಲ. ಹೀಗಾಗಿ ಮುಂದೆ ತಿ.ನರಸೀಪುರ, ನಂಜನಗೂಡು, ಕೆ.ಆರ್.ನಗರ ಮತ್ತು ಮಂಡ್ಯ ಭಾಗಕ್ಕೆ ನೀರು ಹರಿಸದೆ ಇರಲು ತೀರ್ಮಾನಿಸಿ ಕೇವಲ ಕುಡಿಯುವ ನೀರಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಕುಡಿಯುವ ನೀರಿನ ತೊಂದರೆಯಾಗದಂತೆ ಬರ ನಿರ್ವಹಣೆ ಕಾಮಗಾರಿ ಕೈಗೊಳ್ಳಲು ಸರ್ಕಾರ 21 ಕೋಟಿ ರೂ. ಅನುದಾನವನ್ನು ಜಿಲ್ಲಾಡಳಿತದ ಖಾತೆಯಲ್ಲಿ ಮೀಸಲಿಟ್ಟಿದೆ. ಇದರಲ್ಲಿ ಮೈಸೂರು ತಾಲೂಕಿಗೆ 36.53 ಲಕ್ಷ, ನಂಜನಗೂಡು ತಾಲೂಕಿಗೆ 33.86 ಲಕ್ಷ, ತಿ.ನರಸೀಪುರ ತಾಲೂಕಿಗೆ 32.73 ಲಕ್ಷ, ಹುಣಸೂರು ತಾಲೂಕಿಗೆ 35.02 ಲಕ್ಷ, ಕೆ.ಆರ್.ನಗರ ತಾಲೂಕಿಗೆ 37.75 ಲಕ್ಷ, ಪಿರಿಯಾಪಟ್ಟಣ ತಾಲೂಕಿಗೆ 38 ಲಕ್ಷ, ಎಚ್.ಡಿ.ಕೋಟೆ ತಾಲೂಕಿಗೆ 144.68 ಲಕ್ಷ ರೂ. ನಿಗದಿಪಡಿಸಲಾಗಿದ್ದು, ನೂತನ ತಾಲೂಕು ಸರಗೂರಿಗೆ ತಹಸೀಲ್ದಾರ್ ಅವರಿಗೆ ಪ್ರಕೃತಿ ವಿಕೋಪ ಪಿಡಿ ಖಾತೆಯಲ್ಲಿ ಅನುದಾನ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಯಾವುದೇ ಪರಿಸ್ಥಿತಿ ಎದುರಾದರೂ ತಕ್ಷಣವೇ ತುರ್ತು ಕ್ರಮಕೈಗೊಳ್ಳಲು ಸರ್ಕಾರ ನಿರ್ದೇಶನ ನೀಡಿದೆ.