ಮೈಸೂರು: ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘದ ದೈವಾರ್ಷಿಕ ಸಮ್ಮೇಳನ ಏ.10 ಮತ್ತು 11ರಂದು ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಎ.ಎನ್.ಕೃಷ್ಣಮೂರ್ತಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಮೂಲೆ ಮೂಲೆಗಳಿಂದ ಸುಮಾರು ಎರಡು ಸಾವಿರ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ನಿವೃತ್ತ ಬ್ಯಾಂಕ್ ನೌಕರರ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿ, ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ನಿವೃತ್ತ ಬ್ಯಾಂಕ್ ಅಧಿಕಾರಿಗಳಿಗೆ ಕಾಲಕಾಲಕ್ಕೆ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಪಿಂಚಣಿ ನೀಡಲಾಗುತ್ತಿದೆ. ಆದರೂ ಉದ್ಯೋಗಿಗಳ ಭವಿಷ್ಯ ನಿಧಿಗೆ ನಿರ್ವಹಣಾ ಕೊಡುಗೆಯ ಬದಲಾಗಿ ಬ್ಯಾಂಕ್ಗಳಲ್ಲಿ ಪಿಂಚಣಿ ಯೋಜನೆ ಪ್ರಾರಂಭವಾದಾಗಿನಿಂದ, ಬ್ಯಾಂಕ್ ನಿವೃತ್ತಿ ವೇತನದಾರರ ಮೂಲ ಪಿಂಚಣಿ ಪರಿಷ್ಕರಿಸಿಲ್ಲ. ನಿವೃತ್ತ ಅಧೀನ ಸಿಬ್ಬಂದಿಗೆ ನೀಡುತ್ತಿರುವ ಪಿಂಚಣಿಗೆ ಹೋಲಿಸಿದಲ್ಲಿ ಬ್ಯಾಂಕಿನ ಸೇವೆಯಿಂದ ನಿವೃತ್ತರಾದ ಕಾರ್ಯ ನಿರ್ವಾಹಕರಿಗೆ ಅತ್ಯಲ್ಪ ಪಿಂಚಣಿ ನೀಡಲಾಗುತ್ತದೆ. ಜೀವನ ವೆಚ್ಚ ಮತ್ತು ವೃದ್ಧಾಪ್ಯ ವೆಚ್ಚಗಳು ಯುವ ಮತ್ತು ವಯಸ್ಸಾದ ನಿವೃತ್ತರ ಮೇಲೆ ಪರಿಣಾಮ ಏಕರೂಪವಾಗಿ ಬೀರುತ್ತವೆಯಾದರೂ, ಹಳೆಯ ನಿವೃತ್ತರನ್ನು ತಾರತಮ್ಯಕ್ಕೆ ಒಳಪಡಿಸಲಾಗಿದೆ ಎಂದು ಬೇಸರಿಸಿದರು.
ಬೃಹತ್ ಆರೋಗ್ಯ ವಿಮಾ ಪ್ರೀಮಿಯಂ ಬ್ಯಾಂಕ್ ನಿವೃತ್ತ ಅಧಿಕಾರಿಗಳನ್ನು ಶೋಷಿಸುವ ಮತ್ತೊಂದು ಕ್ಷೇತ್ರವಾಗಿದೆ. ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ನೌಕರರಿಗೆ ಆರೋಗ್ಯ ವಿಮಾ ಯೋಜನೆ ರೂಪಿಸಲು ಸರ್ಕಾರ ಬ್ಯಾಂಕ್ಗಳಿಗೆ ಸಲಹೆ ನೀಡಿದ್ದರೂ, ಭಾರತೀಯ ಬ್ಯಾಂಕ್ಗಳ ಸಂಘ, (ಬ್ಯಾಂಕ್ ಮ್ಯಾನೇಜ್ಮೆಂಟ್ಗಳ ಕಾರ್ಟೆಲ್), ಕುತಂತ್ರದಿಂದ ನಿವೃತ್ತರನ್ನು ಉಚಿತ ವಿಮಾ ರಕ್ಷಣೆಯಿಂದ ದೂರವಿಟ್ಟಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯುವ ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಮಹಾಸಭೆ ಮಹತ್ವ ಪಡೆದುಕೊಂಡಿದೆ. ಭಾರತದಾದ್ಯಂತ ಇರುವ ಕೆನರಾ ಬ್ಯಾಂಕ್ನ ನಿವೃತ್ತರು ಮೂಕ ಧೋರಣೆ ಅನುಸರಿಸುತ್ತಿರುವ ಸರ್ಕಾರದ ಗಮನ ಸೆಳೆಯುವ ಮಾರ್ಗಗಳ ಬಗ್ಗೆ ಚರ್ಚಿಸಲಿದ್ದಾರೆಂದರು.
ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಶಿವಪ್ರಸಾದ್, ಜಿ.ಅನಂತಯ್ಯ ಹಂದೆ, ಶ್ರೀಕಂಠಮೂರ್ತಿ, ವಿಠೋಬಾ, ಸುರೇಶ್ ಹಾಜರಿದ್ದರು