ತಿ.ನರಸೀಪುರ: ಮೈಸೂರಿನ ಯುವ ನೆಹರು ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಲಿಯೂರು ಮತ್ತು ನನ್ನವ್ವ ಸಾಂಸ್ಕೃತಿಕ ಕಲಾತಂಡದ ಸಹಯೋಗದೊಂದಿಗೆ ತಾಲೂಕಿನ ಮಲಿಯೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ ರಾಷ್ಟ್ರೀಯ ಸ್ವಯಂ ಸೇವಕರ ದಿನಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ಮಹಾರಾಜಾ ಕಾಲೇಜಿನ ಅಧ್ಯಾಪಕಿ ಡಾ .ದೀನಾಮಣಿ ಆಧುನಿಕ ಪ್ರಪಂಚ ಯಾಂತ್ರಿಕ ಮತ್ತು ವ್ಯಾಪಾರೀಕರಣದ ಕರಾಳತೆಯಿಂದ ನಲುಗಿ ಹೋಗಿದೆ. ಮನುಷ್ಯನಲ್ಲಿ ಮಾನವೀಯತೆ ಎಂದರೆ ಏನು ಎಂಬುದನ್ನು ಹುಡುಕಬೇಕಿದೆ. ಇವೆಲ್ಲದರ ನಡುವೆ ಅಂತಃಕರಣವುಳ್ಳ ಬೆರಳೆಣಿಕೆ ವ್ಯಕ್ತಿಗಳು ಮಾತ್ರ ಮನುಜ ಧರ್ಮದ ಉಳಿವಿಗಾಗಿ ತಮ್ಮ ಮುಖೇನ ಅಥವಾ ಅಧಿಕಾರಿಗಳ ಮೂಲಕ ಮಾಡುವ ಸಾತ್ವಿಕ ಕಾಯಕವೇ ಸ್ವಯಂ ಸೇವೆ. ಸ್ವಯಂ ಸೇವೆಯಲ್ಲಿ ಯಾವುದೇ ಪ್ರತಿಫಲ ಬಯಸಕೂಡದು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ ಮಾತನಾಡಿ, ಜಗತ್ತು ಆಧುನೀಕರಣಗೊಂಡಂತೆ ಮನುಜ ಕ್ರೂರಿಯಾಗುತ್ತಿದ್ದಾನೆ. ಪ್ರಾಣಿಗಳ ವಾಸಸ್ಥಾನಕ್ಕೆ ಅಕ್ರಮ ಪ್ರವೇಶ ಮಾಡುತ್ತಿದ್ದಾನೆ. ಹಾಗಾಗಿ ಪ್ರಾಣಿಗಳು ನಗರದೊಳಗೆ ಪ್ರವೇಶಿಸುತ್ತಿವೆ. ಸ್ವಯಂ ಸೇವೆ ಮತ್ತು ಸಮಾಜ ಸೇವೆಯ ಮನಸ್ಥಿತಿ ಅಂತರ್ಯದಿಂದ ಸ್ಪುರಿಸಬೇಕು ಅನ್ಯರ ಬಲವಂತಕ್ಕೆ ಸೇವೆ ಮಾಡುವುದು ಸ್ವಯಂ ಸೇವೆ ಮತ್ತು ಸಮಾಜ ಸೇವೆ ಆಗುವುದಿಲ್ಲ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ .ಸೀಗನಾಯಕ ಮಾತನಾಡಿ, ಗಾಂಧೀಜಿಯವರು ಸ್ವಯಂ ಸೇವೆಯ ಪ್ರವರ್ತಕರು. ಸಾಲುಮರದ ತಿಮ್ಮಕ್ಕ, ಮದರ್ ಥೆರೆಸ, ಡಾ.ಬಿ.ಆರ್.ಅಂಬೇಡ್ಕರ್ ರವರು ಕೂಡ ಈ ದೇಶದ ಮಹಾನ್ ಸ್ವಯಂ ಸೇವಕರು. ಅವರು ದೇಶಕ್ಕಾಗಿ ಅರ್ಪಣಾ ಮನೋಭಾವದಿಂದ ವಿವಿಧ ಕ್ಷೇತ್ರಗಳಲ್ಲಿ ಸ್ವಯಂ ಸೇವೆಯನ್ನು ಮಾಡಿದ್ದಾರೆ.ಹಾಗಾಗಿ ಅವರು ಹೆಸರುಗಳು ಇಂದಿಗೂ ಚಿರಸ್ಥಾಯಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಪ್ರಾಧ್ಯಾಪಕ ಡಾ.ನೀಲಕಂಠಸ್ವಾಮಿ ,ನನ್ನವ್ವ ಸಾಂಸ್ಕೃತಿಕ ಕಲಾತಂಡದ ವೈ.ಜಿ.ಮಹದೇವ, ಕಸಾಪದ ಚೌಹಳ್ಳಿ ಮಲ್ಲೇಶ್, ನಾಗೇಂದ್ರ, ಕೃಷ್ಣಮೂರ್ತಿ, ಹೆಳವರಹುಂಡಿ ಬಸಪ್ಪ ಮತ್ತಿತರರು ಇದ್ದರು.