ಸರಗೂರು: ತಾಲೂಕಿನ ಬಿ ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡಗಿ ಗ್ರಾಮದಲ್ಲಿ ಶ್ರೀ ಕೊಡಗಿ ಮಾರಮ್ಮರವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.
ಈ ಜಾತ್ರೆಗೆ ಒಂದು ವಾರಕ್ಕೂ ಮುನ್ನವಾಗಿ ಕುರ್ಣೆಗಾಲದವರು ಕೇರಳದ ಸುಲ್ತಾನ್ ಬತ್ತೆರಿಗೆ ಬರಿ ಕಾಲ್ನಡಿಗೆಯಲ್ಲಿ (ಚಪ್ಪಲಿ ಧರಿಸದೆ) ಹೋಗಿ, ರಾತ್ರಿ ಕೇರಳದಲ್ಲಿ ಇದ್ದು, ಮಾರನೇಯ ದಿನ ತೋಟದಿಂದ ಬಾಳೆಕಾಯಿ ತಂದು ಕಾಡಿನಲ್ಲಿ ಇರುವ ತೆಂಕಲಯ್ಯ ಸ್ವಾಮಿ ಯವರ ದೇವಸ್ಥಾನದಲ್ಲಿ ಬಾಳೆಕಾಯಿಯನ್ನು ಇಟ್ಟು ಬಂದು, ನಂತರ ಮಾರಮ್ಮರವರ ಜಾತ್ರೆಯ ಹಿಂದಿನ ದಿನ ಕಾಡಿನಲ್ಲಿ ಇರುವ ತೆಂಕಲಯ್ಯ ದೇವಸ್ಥಾನ ಕ್ಕೆ ಹೋಗಿ ಧೂಪ ದೀಪ ಮೂಲಕ ಗ್ರಾಮಸ್ಥರುಗಳು ಹೋಗಿ ತೆಂಕಲಯ್ಯನಿಗೆ ಪೂಜೆ ಸಲ್ಲಿಸಿ ಬರುತ್ತಾರೆ.
ಇಲ್ಲಿನ ಮಾರಮ್ಮನವರ ದೇವಸ್ಥಾನಕ್ಕೆ ಸುಣ್ಣ, ಬಣ್ಣಗಳಿಂದ ಕಂಗೊಳಿಸುತ್ತಿತ್ತು, ವಿವಿಧ ಬಗೆ ಬಗೆಯ ಹೂವುಗಳಿಂದ ಒಡವೆ ವಸ್ತ್ರ ಗಳಿಂದ ಅಲಂಕರಿಸಿ, ಪೂಜೆ ಪುನಸ್ಕಾರಗಳನ್ನು ನೆರವೇರಿಸಿದ್ದರು. ನಂತರ ಉತ್ಸವದ ಸಮೇತವಾಗಿ ಇಲ್ಲಿನ ನದಿಯಲ್ಲಿ ಪೂಜೆ ಸಲ್ಲಿಸಿ ಮಾರಮ್ಮ ದೇವಿಯ ಕಳಶವನ್ನು ಹೊತ್ತು ಸತ್ತಿಗೆ, ಛತ್ರಿ ಛಾಮರ, ಮಂಗಳವಾದ್ಯ ಸೇರಿದಂತೆ ವಿವಿಧ ಕುಣಿತಗಳಿಂದ ದೇವಸ್ಥಾನಕ್ಕೆ ಬಂದು ತಲುಪಿ ಪೂಜೆ ಪ್ರಾರಂಭವಾಗಿ ಭಕ್ತಾಧಿಗಳು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು.
ಹಿಂದಿನ ರಾತ್ರಿ ಹಾಡಿಯ ಜನಾಂಗದವರಿಂದ ಅದ್ಧೂರಿಯಾಗಿ ಪಿಪಿ ಊದುವ ಹಾಗೂ ತಮಟೆ ವಾದ್ಯ ಮೂಲಕ ಇಡೀ ರಾತ್ರಿ ಹೆಂಗಸು, ಗಂಡಸರೆನ್ನದೆ ಮಕ್ಕಳ ಮೂಲಕ ಕುಣಿಯುತ್ತಾರೆ. ಹಾಗೂ ಭಕ್ತರು ವೀಳ್ಯದೆಲೆ, ಈರುಳ್ಳಿ ಸರಗಳ ಎಸೆಯುವ ಮೂಲಕ ಭಕ್ತರು ತಾವು ತಮ್ಮ ತಮ್ಮ ಹರಕೆಯನ್ನು ತಾಯಿಗೆ ಸಲ್ಲಿಸುತ್ತಾರೆ. ಬೆಳಿಗ್ಗೆ ಯಿಂದ ಸಂಜೆ ವರೆಗೂ ಪೂಜೆ ಸಲ್ಲಿಸಿ ಸಂಜೆ ದೇವಸ್ಥಾನಕ್ಕೆ ಹೊರಗಡೆಯಿಂದ ಬಂದಂತಹ ಎಲ್ಲಾ ಸತ್ತಿಗೆಗಳಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹೊರಟ ಎಲ್ಲಾ ಸತ್ತಿಗೆಗಳು ಮೆರವಣಿಗೆ ಮೂಲಕ ಮೊದಲು ಕೊಡಗಿ ಗ್ರಾಮಕ್ಕೆ ಆಗಮಿಸಿ ಗ್ರಾಮದ ಎಲ್ಲಾ ಮನೆಯವರು ಪೂಜೆ ಸಲ್ಲಿಸಿ ನಂತರ ಕುರ್ಣೆಗಾಲ ಗ್ರಾಮಕ್ಕೆ ಹೊರಡುತ್ತದೆ.
ಮೆರವಣಿಗೆ ಕುರ್ಣೆಗಾಲ ಗ್ರಾಮಕ್ಕೆ ತಲುಪುವ ಮುನ್ನ ಗ್ರಾಮದ ಅಂಕದಿಂದ ಹೊರಗಡೆಯಿಂದ ಬಂದಿದ್ದಂತಹ ಬಾರಿ ಗಾತ್ರದ ಡೋಲು ಕುಣಿತ ತಂಡದವರಿಂದ ಪ್ರಾರಂಭವಾಗಿ ಕುರ್ಣೆಗಾಲದ ಯುವಕರು ಕುಣಿದು ಕುಪ್ಪಳಿಸುವ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಸತ್ತಿಗೆಗಳು ಛತ್ರಿ ಛಾಮರ, ಮಂಗಳವಾದ್ಯ, ತಮಟೆ, ಡಮರುಗಗಳು ಸಂಭ್ರಮಿಸಿದವು.
ವಾದ್ಯಗೋಷ್ಠಿಯ ಮುಖಾಂತರ ಬಂದ ಸತ್ತಿಗೆಗಳ ಮೆರವಣಿಗೆಯು ಇಲ್ಲಿನ ಗೌಡಿಕೆ ಮಾದಪ್ಪರವರ(ಬಸವಣ್ಣನವರ) ಮನೆ ಹತ್ತಿರ ಬಂದು ಮೆರವಣಿಗೆ ಕೊನೆಗೊಳ್ಳುತ್ತದೆ. ಕುರ್ಣೆಗಾಲ ಮತ್ತು ಕೊಡಗಿ ಗ್ರಾಮದ ಎಲ್ಲಾ ಮನೆಗಳಲ್ಲಿ ದೂರ ಊರುಗಳಿಂದ ಬಂದ ನೆಂಟರಿಷ್ಟರು,ಸಂಭಂಧಿಕರುಗಳು ಅವರವರ ಮನೆಗಳಲ್ಲಿ ಊಟ, ತಿಂಡಿ ತಿಂದು ಸಂಭ್ರಮಿಸುತಿದ್ದರು.
ಕುರ್ಣೆಗಾಲ ಯಜಮಾನರಾದ ಗೌಡಿಕೆ ಬಸವಣ್ಣ, ಪ್ರಭುಸ್ವಾಮಿ, ಚಂದ್ರಪ್ಪ, ಕೆ ಪಿ ಮಹದೇವಪ್ಪ, ಇಂದ್ರಪ್ಪ, ಮಹಾವೀರ, ಪರಶಿವ, ಗಿರೀಶ್, ಕೆ ಸಿ ಮಲ್ಲಪ್ಪ, ಯಜಮಾನರಾದ ಸರೋಜ, ಚಾಮರಾಜು, ನಾಗಯ್ಯ, ಮಣಿ, ಕೊಡಗಿ ಯಜಮಾನರಾದ ನಾಗರಾಜು,ಶಿವಣ್ಣ, ಶಿವಯ್ಯ, ಗಣೇಶ, ಕುಮಾರ, ಮಾದೇವಯ್ಯ ಇಲ್ಲಿಗೆ ಸುತ್ತ ಮುತ್ತಲಿನ ಗ್ರಾಮದ ಎಲ್ಲಾ ಜನಾಂಗದ ಯಜಮಾನರು, ರಾಜಕೀಯ ಮುಖಂಡರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಈ ಜಾತ್ರೆಯು ಕುರ್ಣೆಗಾಲ ಗ್ರಾಮದ ನೇತೃತ್ವದಲ್ಲಿ ಕೊಡಗಿ ಗ್ರಾಮದ ಸಹಕಾರದಿಂದ ಅದ್ಧೂರಿಯಾಗಿ ನೆರವೇರಿತು.