ಸರಗೂರು: ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಕಂದೇಗಾಲ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ, ವಿಶೇಷ ಪೂಜೆ ನೆರೆದ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಜಾತ್ರೆ ಹಿನ್ನಲೆಯಲ್ಲಿ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮನೆಗಳು ತಳಿರು ತೋರಣದಿಂದ ಸಿಂಗಾರಗೊಂಡಿದ್ದರೆ ದೇವಸ್ಥಾನ ಸೇರಿದಂತೆ ಸುತ್ತ ಮುತ್ತ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ದೇವರಿಗೆ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ, ಬೆಳಗಿನ ಜಾವದಿಂದಲೇ ಹೋಮ ಹವನ ನಡೆದವು, ಗಣಪತಿ ಹೋಮ ಪುಣ್ಯ ಕಳಶ ಪ್ರತಿಷ್ಠಾಪನೆ,ದುರ್ಗಾ ಹೋಮ, ಕುಂಕುಮಾರ್ಚನೆ, ಇತರ ಪೂಜೆ ನೆರವೇರಿದವು.
ದೇವರಿಗೆ ಪಂಜಿನ ಸೇವೆ ಮಹಾಮಂಗಳಾರತಿ ನಡೆಸಲಾಯಿತು, ದಡದಹಳ್ಳಿ ಮಠಾಧ್ಯಕ್ಷರಾದ ಷಡಕ್ಷರ ಸ್ವಾಮೀಜಿ, ಪಡವಲು ವಿರಕ್ತ ಮಠಾಧ್ಯಾಕ್ಷರಾದ ಮಹಾದೇವ ಸ್ವಾಮೀಜಿ, ಬೀಚನಹಳ್ಳಿ ಪುರ ಪಟ್ಟದ ಮಠಾಧ್ಯಕ್ಷರಾದ ಶ್ರೀ ನಾಗೇಂದ್ರ ಸ್ವಾಮೀಜಿ ಪಾಲ್ಗೊಂಡಿದ್ದರು.
ಬೆಳಿಗ್ಗೆ ಕಂದೇಗಾಲ ಗ್ರಾಮಕ್ಕೆ ತೆರಳಿ ಗಂಗೆ ಪೂಜೆ ನಡೆಸಿ ಶ್ರೀ ಮಹದೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಯನ್ನು ರಥದ ಮೇಲೆ ಇರಿಸಿ ಕಂಚಿನ ಹುಲಿವಾಹನದ ಮುಖಾಂತರ ಪೂರ್ಣಕುಂಭ ಕಳಶದೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯ, ಸತ್ತಿಗೆ, ಸುರಪಾಣಿ,ವೀರಗಾಸೆ ಕುಣಿತ, ಬ್ಯಾಂಡ್ ಸೆಟ್ ಹಾಗೂ ಕಲಾತಂಡಗಳ ಜೊತೆಯಲ್ಲಿ ಮೆರವಣಿಗೆ ನಡೆಸಲಾಯಿತು.
ಉತ್ಸವ ಮೂರ್ತಿಯು ದೇವಾಲಯ ತಲುಪಿದ ನಂತರ ವಿಶೇಷ ಪೂಜೆ, ಪುನಸ್ಕಾರಗಳನ್ನು ನಡೆಸಿ ಮಹಾಮಂಗಳಾರತಿ ಮಾಡಿ ಉತ್ಸವ ಮೂರ್ತಿಯನ್ನು ಹೊತ್ತ ರಥವನ್ನು ದೇವಸ್ಥಾನದ ಸುತ್ತ ಶ್ರದ್ಧಾ ಭಕ್ತಿಯಿಂದ ಎಳೆದರು. ಬಾಲಕಿಯರು ಪೂರ್ಣ ಕುಂಭ ಕಳಶ ಹೊತ್ತು ಹರಕೆ ತೀರಿಸಿದರು. ಉತ್ಸವ ಮೂರ್ತಿಯು ದೇವಸ್ಥಾನದ ಬಳಿ ಬಂದ ತಕ್ಷಣ ಭಕ್ತರು ಕೊಂಡವನ್ನು ಹಾಯ್ದರು.
ಕಂದೇಗಾಲ ಶ್ರೀ ಮಹದೇಶ್ವರ ಸ್ವಾಮಿಯ ದೇವಸ್ಥಾನದ ಗೌರವಾಧ್ಯಕ್ಷರಾದ ಶ್ರೀ ವಾಲ್ಮೀಕಿ ಮಹರ್ಷಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ ಚಿಕ್ಕವೀರನಾಯಕ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂಪಿ ನಾಗರಾಜು, ಕಮಿಟಿ ಅಧ್ಯಕ್ಷರಾದ ಪಟೇಲ್ ವಿ ರಾಜಪ್ಪನವರು, ಉಪಾಧ್ಯಕ್ಷರಾದ ದಾಸಭೋವಿ, ಕಾರ್ಯದರ್ಶಿ ಕಂದೇಗಾಲ ಸೋಮಣ್ಣ, ಕೆ ವಿ ರುದ್ರಯ್ಯ, ಖಜಾಂಚಿಯಾದ ಬಿದರಹಳ್ಳಿ ಮಾದಪ್ಪ ಹಾಗೂ ಕಮಿಟಿಯ ಎಲ್ಲಾ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ರಾತ್ರಿ ಸಾಗರೆ ಎಸ್ ಡಿ ಸುರೇಶ್ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರವೇರಿತು. ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು.