ಮೈಸೂರು: ಸಮಾಜ ಸೇವೆಯ ಹೆಸರಿನಲ್ಲಿ ವಿದೇಶಿ ದೇಣಿಗೆ ಪಡೆಯುತ್ತಿರುವ ಸಮಾಜ ಪರಿವರ್ತನ ಸಂಸ್ಥೆಯ ಮುಖಂಡ ಎಸ್.ಆರ್.ಹಿರೇಮಠ್ ಅರೆಹುಚ್ಚನಂತೆ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಎಸ್.ಆರ್.ಹಿರೇಮಠ್ ಒಬ್ಬರು ಹಿರಿಯ ಮುಖಂಡ. ಆದರೆ, ಸಿದ್ದರಾಮಯ್ಯ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅವರನ್ನು ಏಕವಚನದಲ್ಲಿ ನಿಂದಿಸುವ ಮಾತುಗಳು ಸರಿಯಲ್ಲ. ನಾಲಿಗೆಯ ಮೇಲೆ ಹಿಡಿತವನ್ನು ಇಟ್ಟುಕೊಂಡು ಮಾತನಾಡಬೇಕು ಎಂದು ತಾಕೀತು ಮಾಡಿದರು.
ರಾಜ್ಯಕ್ಕೆ ನಿಮ್ಮ ಕೊಡುಗೆ ಏನು. ಎಸಿಬಿಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ಹುಟ್ಟುಹಾಕಲಿಲ್ಲ. ದೇಶದ 12 ರಾಜ್ಯಗಳಲ್ಲಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಸಿಬಿಗೆ ಬಲ ನೀಡುವ ಬದಲಿಗೆ ಭ್ರಷ್ಟಾಚಾರದ ಕೇಂದ್ರವನ್ನಾಗಿ ಮಾಡಿಕೊಂಡರು. ಎಷ್ಟು ಪ್ರಕರಣಗಳಲ್ಲಿ ಲಾಜಿಕ್ ಎಂಡ್ಗೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಯಾವುದೇ ವಿಚಾರದಲ್ಲಿ ಎಸ್.ಆರ್.ಹಿರೇಮಠ್ ಅವರೊಂದಿಗೆ ನೇರವಾಗಿ ಚರ್ಚೆ ನಡೆಸಲು ಸಿದ್ಧನಿದ್ದೇನೆಂದು ಸವಾಲು ಹಾಕಿದ ಲಕ್ಷ್ಮಣ್, ಗೃಹಸಚಿವ ಅಮಿತ್ ಶಾ, ಪ್ರಧಾನಿ ಮೋದಿ ಬಗ್ಗೆ ಮಾತನಾಡಿ ಕೊರೊನಾ ಸಂದರ್ಭದಲ್ಲಿ ದೇಶದ ಜನರಿಂದ ಸಂಗ್ರಹಿಸಿದ ಪಿಎಂ ಫಂಡ್ ಬಗ್ಗೆ ಚಕಾರ ಎತ್ತುತ್ತಿಲ್ಲ. ಅಮಿತ್ ಶಾ ಪುತ್ರನ ಹೆಸರಿನಲ್ಲಿರುವ ಟೆಂಪಲ್ ಎಂಟರ್ಪ್ರೈಸಸ್ನಲ್ಲಿ ನಡೆಯುತ್ತಿದ್ದ ಆರು ಲಕ್ಷ ರೂ.ವಹಿವಾಟು ಈಗ 1,300 ಕೋಟಿ ದಾಟಿದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು ಸರಿಯಲ್ಲ. ಯಾವುದೇ ರಾಜಕಾರಣಿಯ ಬಗ್ಗೆ ಕಳ್ಳ, ಸುಳ್ಳ ಎನ್ನುವುದಕ್ಕೆ ಇವರೇನೂ ನ್ಯಾಯಾಧೀಶರೇ? ಸಿದ್ದರಾಮಯ್ಯ ಧೂಳಿಗೆ ಸಮಾನರು ಎಂದು ಟೀಕಿಸಿದರು.
ಸಮಾಜ ಸೇವೆಯ ಹೆಸರಿನಲ್ಲಿ ಏನು ಮಾತನಾಡಿದರೂ ಸಹಿಸಿಕೊಂಡು ಇರುತ್ತಾರೆ ಎನ್ನುವ ಭಾವನೆ ಹೊಂದಿರಬಾರದು. ಅಮೆರಿಕಾದಿಂದ ನಿಮ್ಮನ್ನು ಯಾಕೆ ಓಡಿಸಿದರು. ಪರಿಸರ ಸಂರಕ್ಷಣೆ ಹೆಸರಿನಲ್ಲಿ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ ಹೊರತು ಬೇರೇನೂ ಮಾಡಿಲ್ಲ. ಕಾರ್ಯಕರ್ತರ ಸಹನೆ ಕೆಣಕಬೇಡಿ. ಹಾಗಾದರೆ, ಅಟ್ಟಿಸಿಕೊಂಡು ಹೊಡೆಯಿರಿ ಎನ್ನುವ ಕರೆ ಕೊಡಬಹುದೇ ಹಿರೇಮಠ ಅವರೇ ಎಂದು ಪ್ರಶ್ನಿಸಿದರು.