ಮೈಸೂರು: ಮೈಸೂರು ಕೇಂದ್ರ ಕಾರಾಗೃಹದ ಮೇಲೆ ಶ್ವಾನ ದಳದೊಂದಿಗೆ ಮೈಸೂರು ನಗರ ಪೊಲೀಸರು ದಿಢೀರ್ ದಾಳಿ ನಡೆಸಿ ತಪಾಸಣೆ ಮಾಡಿದ್ದು ಈ ವೇಳೆ ಚಾಕು ಹಾಗೂ ಮೊಬೈಲ್ ಸಿಮ್ ಪತ್ತೆಯಾಗಿದೆ.
ಮೈಸೂರು ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ವೇಳೆ ಎರಡು ಹಂತದ ಭದ್ರತೆ ಇದ್ದರೂ ಮೊಬೈಲ್ ಸಿಮ್ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಿಮ್ ಪತ್ತೆಯಾಗಿರುವುದರಿಂದ ಜೈಲಿನಲ್ಲಿ ಮೊಬೈಲ್ ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಜತೆಗೆ ಹೆಚ್ಚಿನ ತಪಾಸಣೆ ನಡೆಸಿದಾಗ ಮತ್ತಷ್ಟು ವಸ್ತುಗಳು ಸಿಕ್ಕಿರುವುದು ಅನುಮಾನಕ್ಕೆ ಕಾರಣವಾಗಿದೆ.
ತಪಾಸಣೆ ವೇಳೆ ಕಾರಾಗೃಹದ ಕೊಠಡಿಗಳಲ್ಲಿ ನಗದು ಪತ್ತೆಯಾಗಿದ್ದು, ಬ್ಲೇಡ್, ಚಾಕು ಕೂಡ ಸಿಕ್ಕಿದೆ. ಮಂಗಳವಾರ ಬೆಳಗ್ಗೆ ನಗರ ಪೊಲೀಸ್ ಆಯುಕ್ತ ರಮೇಶ್.ಬಿ, ಡಿಸಿಪಿಗಳಾದ ಎಂ.ಮುತ್ತುರಾಜು ಮತ್ತು ಎಸ್.ಜಾಹ್ನವಿ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಕಾರಾಗೃಹದ ಆವರಣ ಸೇರಿದಂತೆ ಕೈದಿಗಳು ತಂಗಿದ್ದ ಕೊಠಡಿಗಳಲ್ಲಿ ಶೋಧ ಕಾರ್ಯ ನಡೆಸಿದರು.
ಶ್ವಾನ ದಳದ ಸಿಬ್ಬಂದಿ ಕೂಡ ಪರಿಶೀಲನೆ ನಡೆಸಿದರು. ದಾಳಿ ಕಾರ್ಯದಲ್ಲಿ ನಗರದ ಎಲ್ಲ ಎಸಿಪಿಗಳು, ನಾನಾ ಠಾಣೆಗಳ ಇನ್ಸ್ಪೆಕ್ಟರ್ಗಳು ಮತ್ತು ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.