ಮೈಸೂರು: ರಾಜ್ಯ ಸರ್ಕಾರ ಕಬಿನಿ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ರೈತರಿಗೆ ದ್ರೋಹ ಬಗೆದಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕನ್ನಡಪರ ಸಂಘಟನೆಗಳ ಸದಸ್ಯರು ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರಲ್ಲದೆ, ಕಾಡಾ ಕಚೇರಿಯಲ್ಲಿರುವ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಗನ್ಹೌಸ್ನಲ್ಲಿರುವ ಕುವೆಂಪು ಉದ್ಯಾನವನದಲ್ಲಿ ಸಭೆ ನಡೆಸಿ ಬಳಿಕ ಮೆರವಣಿಗೆ ಮೂಲಕ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಡೆಪ್ಯೂಟಿ ಚೀಫ್ ಇಂಜಿನಿಯರ್ ರಂಗನಾಥ್ ಸ್ಥಳಕ್ಕಾಗಮಿಸಿ ಈಗಾಗಲೇ ಕಬಿನಿ, ಕಾವೇರಿಯಿಂದ ಬಿಡುತ್ತಿರುವ ನೀರನ್ನು ಕಡಿಮೆ ಮಾಡಿದ್ದೇವೆ. ನಿಮ್ಮ ಹೋರಾಟದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ನಾವೇನು ಮುಖ್ಯ ಇಂಜಿನಿಯರ್ ಕಚೇರಿ ದರೋಡೆ ಮಾಡಲು ಬಂದಿಲ್ಲ. ಇದು ರಾಜ್ಯದ ರೈತರ ಹಿತಾಶಕ್ತಿ ಕಾಪಾಡುವ ಕಚೇರಿಯಾಗಿದ್ದರೆ ಕೂಡಲೇ ನದಿಗೆ ಹರಿಸುವ ನೀರು ನಿಲ್ಲಿಸಿ. ಇಲ್ಲವೇ ಕಚೇರಿ ಬಾಗಿಲು ಮುಚ್ಚಿ ಮನೆಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಂತೆ ಕಾಣುತ್ತಿದೆ. ನೀರು ಖಾಲಿ ಮಾಡಿ ಸಭೆ ನಡೆಸುವ ನಾಟಕವಾಡುತ್ತಿದೆ. ಮಂತ್ರಿಗಳು ರೈತರಿಗೆ ಕಟ್ಟು ನೀರು ಹರಿಸುತ್ತೇವೆ ಎಂದು ಪಾಠ ಹೇಳುತ್ತಾರೆ. ಆದರೆ ತಮಿಳುನಾಡಿಗೆ ನಿರಾಯಾಸವಾಗಿ ನೀರು ಬಿಡುತ್ತಿದ್ದಾರೆ ಇದು ರಾಜ್ಯದ ರೈತರಿಗೆ ಬಗೆದ ದ್ರೋಹ ಎಂದು ಕಿಡಿ ಕಾರಿದರು.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯ ಸರ್ಕಾರ ತುಳಿತಕ್ಕೆ ಒಳಗಾದ ರೈತ ಮುಖಂಡರನ್ನು ಹೊರಗಿಟ್ಟು, ರೈತರಿಗೆ ಅನ್ಯಾಯ ಮಾಡುವವರೇ ಸರ್ವ ಪಕ್ಷದ ಸಭೆ ನಡೆಸುವುದು ಎಷ್ಟು ಸಮಂಜಸ. ಎಲ್ಲ ಪಕ್ಷಗಳು ನೀರಿನ ವಿಚಾರದಲ್ಲಿ ರೈತರಿಗೆ ವಂಚನೆ ಮಾಡುತ್ತಲೆ ಬಂದಿವೆ. ಅಂತಹವರೇ ಇಂದು ಸಭೆ ನಡೆಸುತ್ತಿದ್ದಾರೆ. ಇವರಿಂದ ರಾಜ್ಯದ ರೈತರಿಗೆ ನ್ಯಾಯ ಸಿಗಲು ಸಾಧ್ಯವೇ? ರಾಷ್ಟ್ರೀಯ ಜಲನೀತಿಗಾಗಿ ಬಹಳ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ರಾಜ್ಯದ ನೆಲ ಜಲ ವಿಷಯ ಬಂದಾಗ ಒಂದಾಗಿ ಹೋರಾಡುವುದು ರಾಜ್ಯದ ಹಿತರಕ್ಷಣೆಗೆ ಅನುಕೂಲವಾಗುತ್ತದೆ. ಈ ದಿಕ್ಕಿನಲ್ಲಿ ಸರ್ಕಾರ ಯೋಚನೆ ಮಾಡಬೇಕು ಎಂದರು.
ಪ್ರತಿಭಟನೆಯಲ್ಲಿ ಚನ್ನರಾಯಪಟ್ಟಣದ ರೈತ ಮುಖಂಡ ಮೀಸೆ ಮಂಜಣ್ಣ, ಹತ್ತಳಿ ದೇವರಾಜ್, ಸೋಮಶೇಖರ್, ಬರಡನಫುರ ನಾಗರಾಜು, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಿರಗಸೂರು ಶಂಕರ, ಕಮಲಮ್ಮ, ಸಿದ್ದೇಶ, ವೆಂಕಟೇಶ, ರವಿ, ಕನ್ನಡ ಸಂಘಟನೆಗಳ ಮಂಜುನಾಥ್, ಆಮ್ ಆದ್ಮಿ ಪಕ್ಷದ ಮೋಹನ್ ದಾಸರಿ ಕುಶಾಲಸ್ವಾಮಿ, ನಂಜಪ್ಪ, ಕಾಳೇಗೌಡ, ಮಾಳವಿಕಾ, ರಂಗಯ್ಯ, ರಾಜಶ್ರೀ, ಸಿದ್ದರಾಜು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.