ಮೈಸೂರು: ಖಾತೆ ಬದಲಾವಣೆ, ಹಕ್ಕುಪತ್ರ, ಸ್ವಾಧೀನ ಪತ್ರ, ಪೌತಿ ಖಾತೆ ವರ್ಗಾವಣೆ, ಬದಲಿ ನಿವೇಶನ ಕೋರಿ ಅರ್ಜಿ ಸೇರಿದಂತೆ ಮುಡಾ ಅದಾಲತ್ನಲ್ಲಿ ಸಮಸ್ಯೆಗಳ ಸುರಿಮಳೆ ಕಂಡು ಬಂದಿತು.
ಸಾರ್ವಜನಿಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಂಗಳವಾರ ಮುಡಾ ಸಭಾಂಗಣದಲ್ಲಿ ಆಯೋಜಿಸಿದ್ದ ಅದಾಲತ್ನಲ್ಲಿ 200ಕ್ಕೂ ಹೆಚ್ಚು ಮಂದಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಗಮಿಸಿದ್ದರು. ಅವರಲ್ಲಿ 50 ಮಂದಿಗೆ ಟೋಕನ್ ಸಿಕ್ಕಿತ್ತು. ಅದಾಲತ್ಗೆ ಆರಂಭದಲ್ಲಿ ಮಳೆ ಅಡ್ಡಿಯಾಯಿತು. ಮಧ್ಯಾಹ್ನವಾಗುತ್ತಿದ್ದಂತೆ ಸುರಿಯಿತು. ತಕ್ಷಣವೇ ಮುಡಾ ಅಧ್ಯಕ್ಷರ ಸಭಾಂಗಣದಲ್ಲಿ ಅದಾಲತ್ ನಡೆಯಿತು. ಕಚೇರಿಯ ಕಾರಿಡಾರ್ಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದರು.
ಹೆಬ್ಬಾಳದ ಮಂಗಳಮ್ಮ, ಮುಡಾ ಜಮೀನು ಸ್ವಾಧೀನಕ್ಕೆ ಪಡೆದು 20×30 ನಿವೇಶನ ಹಾಗೂ 12 ಸಾವಿರ ಪರಿಹಾರ ನೀಡುವುದಾಗಿ ಹೇಳಿತ್ತು. ಅದು ದಾಯಾದಿಗಳ ಪಾಲಾಗಿದ್ದು, ನಮಗೆ ಏನೂ ಸಿಕ್ಕಿಲ್ಲ 2008 ರಿಂದಲೂ ಕಚೇರಿಗೆ ಅಲೆಯುತ್ತಿದ್ದೇವೆ. ಆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅಲವತ್ತುಕೊಂಡರು. ಹಲವು ವರ್ಷಗಳ ಹಿಂದೆಯೇ ಪರಿಹಾರ ಹಂಚಿಕೆ ಮಾಡಲಾಗಿದೆ. ಮತ್ತೊಮ್ಮೆ ಪರಿಶೀಲಿಸಿ ಅಗತ್ಯ ಕ್ರಮವಹಿಸಲಾಗುವುದು ಎಂದು ಅಧ್ಯಕ್ಷ ಯಶಸ್ವಿ ಎಸ್.ಸೋಮಶೇಖರ್ ಪ್ರತಿಕ್ರಿಯಿಸಿದರು.
ಕೆ.ಆರ್.ಮೊಹಲ್ಲಾದಲ್ಲಿ 2 ನಿವೇಶನವಿದ್ದು, ಒಂದೇ ಖಾತೆ ಮಾಡಿಕೊಡುವಂತೆ ಕಳೆದ 6 ತಿಂಗಳಿಂದ ಅಲೆಯುತ್ತಿದ್ದೇನೆ. ಪಾಲಿಕೆಯವರು ಮುಡಾದಲ್ಲಿ ವಿಚಾರಿಸಿಯೆಂದರೆ, ಮುಡಾದವರು ಪಾಲಿಕೆಗೆ ಹೋಗಿ ಎನ್ನುತ್ತಾರೆ. ದಯವಿಟ್ಟು ಇಲ್ಲಿ ಆಗುವುದಿಲ್ಲವೆಂಬ ಪತ್ರವನ್ನಾದರೂ ಕೊಡಿ ಎಂದು ಕೆ.ಆರ್.ಮೊಹಲ್ಲಾದ ಕೆ.ವಿಜಯಲಕ್ಷ್ಮಿ ಕೋರಿದರು. ಅರ್ಜಿ ಪಡೆದು ಪರಿಶೀಲಿಸುವಂತೆ ಅಧ್ಯಕ್ಷ ಯಶಸ್ವಿ ಸೋಮಶೇಖರ್ ಸಿಬ್ಬಂದಿಗೆ ಸೂಚಿಸಿದರು.
ಮುಡಾ ಕಾರ್ಯದರ್ಶಿ ಎನ್.ಸಿ.ವೆಂಕಟರಾಜು, ಸೂಪರಿಂಟೆಂಡೆಂಟ್ ಎಂಜಿನಿಯರ್ ಚೆನ್ನಕೇಶವ, ಸದಸ್ಯರಾದ ಲಕ್ಷ್ಮಿದೇವಿ, ನವೀನ್ ಕುಮಾರ್, ಯೋಜನಾಧಿಕಾರಿ ಶೇಷ, ಮುಖ್ಯ ಲೆಕ್ಕಾ ಪರಿಶೋಧಕ ಅಧಿಕಾರಿ ಮುತ್ತ ಇದ್ದರು.