ಮೈಸೂರು: ಮೈಸೂರಿನಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮುಂದುವರೆದಿದ್ದು, ನಗರದ ಭುಗತಹಳ್ಳಿ ಹೊರವಲಯದ ವೆಂಕಟಗಿರಿ ಬಡಾವಣೆಯ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದುದನ್ನು ಪತ್ತೆಹಚ್ಚಿ ಯುವತಿಯನ್ನು ರಕ್ಷಿಸಿದ್ದು, ಆರೋಪಿ ಪರಾರಿಯಾಗಿದ್ದಾನೆ.
ಅಭಿ ಎಂಬಾತನೇ ಯುವತಿಯನ್ನು ಇಟ್ಟುಕೊಂಡು ವೇಶ್ಯಾವೃತಿ ನಡೆಸುತ್ತಿದ್ದ ವ್ಯಕ್ತಿಯಾಗಿದ್ದು, ಈತನ ವಿರುದ್ಧ ಮೈಸೂರು ಮಹಿಳಾ ಪೊಲೀಸ್ ಠಾಣೆ ಮೊ.ನಂ.55/2022 ಕಲಾಂ 3,4,5,6,7, ಐ.ಟಿ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿದೆ. ಈತ ಮನೆಯಲ್ಲಿಯೇ ಯುವತಿಯನ್ನು ಇಟ್ಟುಕೊಂಡು ಮನೆಗೆ ಗ್ರಾಹಕರನ್ನು ಕರೆಯಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದನು. ಈ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸರು ಮಹಜರು ಪಂಚಾಯ್ತುದಾರರಾಗಿ ಕರುನಾಡ ರಕ್ಷಣಾ ವೇದಿಕೆ ಸದ್ಯಸರಾದ ಬಸವರಾಜು, ಸದಸ್ಯರಾದ ಸಂಜಯ್ ಅವರೊಂದಿಗೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ದಾಳಿ ಮಾಡಿ ಸ್ಥಳದಲ್ಲಿದ್ದ ಇಬ್ಬರು ಗ್ರಾಹಕರಾದ ಶ್ರೀಧರ್ ರೆಡ್ಡಿ, ಸಂದೀಪ್ ಮತ್ತು ಒಬ್ಬ ಸಂತ್ರಸ್ಥ ಯುವತಿಯನ್ನು ರಕ್ಷಿಸಿದ್ದು ಈ ವೇಳೆ ಅರೋಪಿ ಅಭಿ ಪರಾರಿಯಾಗಿದ್ದಾನೆ.
ಮೈಸೂರು ಗ್ರಾಮಾಂತರ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಎಂ.ಎಸ್. ಪೂರ್ಣಚಂದ್ರ ತೇಜಸ್ವಿ ಅವರ ಮಾರ್ಗದರ್ಶನದಲ್ಲಿ ಮಹಿಳಾ ಠಾಣಾ ನಿರೀಕ್ಷಕರಾದ ಮಮತಾ ಮತ್ತು ಸಿಬ್ಬಂದಿ ರಾಮ್ ಪ್ರಸಾದ್, ಸುನೀಲ್, ಹರೀಶ್ ಕುಮಾರ್, ದ್ರಾಕ್ಷಾಯಿಣಿ, ಚಾಲಕರಾದ ಚಿಕ್ಕಲಿಂಗಯ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.