ಬೆಂಗಳೂರು: ಕರ್ನಾಟಕವನ್ನು ಅಪೌಷ್ಠಿಕ ಹಾಗೂ ಅನೀಮಿಯಾ ಮುಕ್ತ ರಾಜ್ಯವನ್ನಾಗಿಸಲು ಕಾರ್ಪೊರೇಟ್ ಕಂಪನಿಗಳ ಜೊತೆಗೆ ಸರ್ಕಾರ ಕೈಜೋಡಿಸಲಿದೆ ಎಂದು ಯೋಜನೆ, ಸಾಂಖ್ಯಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದರು.
ವಿಕಾಸ ಸೌಧದಲ್ಲಿ ಸರ್ಕಾರದ ಸಿಎಸ್ಆರ್(ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ಪೋರ್ಟಲ್ ಆಕಾಂಕ್ಷ ಬಗೆಗೆ ಸತ್ವ ಹಾಗೂ ಇತರ ಕಂಪನಿಗಳ ಸಹಯೋಗದಿಂದಿಗೆ ಹಮ್ಮಿಕೊಳ್ಳಲಾದ ರಾಜ್ಯದಲ್ಲಿ ಪೌಷ್ಟಿಕತೆ ಹಾಗೂ ಆರೋಗ್ಯ ನಿರ್ವಹಣೆ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರದ ಯೋಜನೆ ಇಲಾಖೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾರ್ಪೊರೇಟ್ ವಲಯದ ಸಹಕಾರದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಿಎಸ್ಆರ್ ಅಡಿ ಕಂಪನಿಗಳು ಧನಸಹಾಯದಿಂದ ಸಹ ಯೋಜನೆಗಳ ಯಶಸ್ಸಿಗೆ ಕಾರಣವಾಗಿದೆ. ಸರ್ಕಾರದ ಜೊತೆಗೆ ಖಾಸಗಿ ಕಂಪನಿಗಳು, ಆರೋಗ್ಯ ರಕ್ಷಣೆ, ಪೌಷ್ಟಿಕಾಂಶ ನಿರ್ವಹಣೆ, ಆಹಾರ ಹಾಗೂ ಇನ್ನಿತರ ಆದ್ಯತಾ ಕ್ಷೇತ್ರಗಳಲ್ಲಿ ಕೈ ಜೋಡಿಸುತ್ತದೆ. ಇದರಿಂದ ಈಗಿರುವ ಕಾರ್ಯಕ್ರಮಗಳ ಮುನ್ನಡೆಯುವುದರ ಜೊತೆಗೆ ಹೊಸ ತಂತ್ರಜ್ಞಾನ ಅನ್ವೇಷಣೆ, ಆವಿಷ್ಕಾರಕ್ಕೂ ಸಹ ನಾಂದಿ ಹಾಕಲಿದೆ.
ಇಂದು ಭಾಗವಹಿಸಿದ್ದ 30 ಕಾರ್ಪೊರೇಟ್ ಕಂಪೆನಿಗಳಲ್ಲಿ ಪ್ರಮುಖ ಕಂಪನಿಗಳಾದ ಇನ್ಫೋಸಿಸ್, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್, ಸ್ಪೂರ್ತಿ ಐಟಿಸಿ, ಹೆಚ್ಎಎಲ್, ಸಿಪ್ಲ, ಎಂಬಸ್ಸಿ ಮುಂತಾದವುಗಳು ಸೇರಿದೆ. ಗ್ರಾಮೀಣ ಭಾಗಗಳಿಗೂ ಆರೋಗ್ಯ ಸೇವೆಗಳು ತಲುಪಬೇಕೆಂದು ಎಲ್ಲರ ಉದ್ದೇಶವಾಗಿದೆ. ಮಕ್ಕಳ, ತಾಯಂದಿರ ಅಪೌಷ್ಟಿಕತೆ ಕಡಿಮೆ ಮಾಡಿ ಸ್ವಸ್ಥ ಕರ್ನಾಟಕ ನಿರ್ಮಿಸುವುದು ನಮ್ಮೆಲ್ಲರ ಗುರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯೋಜನೆ ಇಲಾಖೆ ಕಾರ್ಯದರ್ಶಿಗಳಾದ ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.