ಮೈಸೂರು: ಪ್ರತಾಪಸಿಂಹ ಭಯೋತ್ಪಾದಕ ಎಂಬ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲ. ಪ್ರತಾಪಸಿಂಹ ಮೈಸೂರಿನ ಗೌರವಾನ್ವಿತ ಸಂಸದರಾಗಿದ್ದು, ಉಗ್ರ ವೇಷದ ಭಾವಚಿತ್ರ ಪ್ರದರ್ಶನಕ್ಕೂ-ಕಾಂಗ್ರೆಸ್ಗೂ ಸಂಬಂಧವಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪ್ರತಾಪಸಿಂಹ ಅವರನ್ನು ಬುರ್ಖಾ ಹಾಕಿ, ಕೈಯಲ್ಲಿ ಬಾಂಬ್ ಕೊಟ್ಟು ದೇಶದ್ರೋಹಿ, ಭಯೋತ್ಪಾದಕ ಎಂದೆ ಬರೆಯಲಾಗಿತ್ತು. ಈ ಪ್ರತಿಭಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ವಿರೋಧಿ ಎಂದೇ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಎಂದೂ ಮುಸ್ಲಿಂ ವಿರೋಧಿಯಲ್ಲ. ಇದೇ ವಿಚಾರವಾಗಿ ಒಕ್ಕಲಿಗರ ಸಂಘದ ನಿರ್ದೇಶಕರು ಕಾಂಗ್ರೆಸ್ ಟೀಕಿಸುತ್ತಿದ್ದಾರೆ. ಪ್ರತಿಭಟನೆ ನಡೆಸಿದ ವೇದಿಕೆಯ ಕೆ.ಎಸ್.ಶಿವರಾಮ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಭೇಟಿ ವೇಳೆ ಹಿಂದೆ, ಮುಂದೆ ನಿಂತಿರುತ್ತಾರೆ. ಅವರು ಕಾಂಗ್ರೆಸ್ ಪಕ್ಷದ ಸದಸ್ಯರೂ ಅಲ್ಲ. ನಮಗೂ ಅದಕ್ಕೂ ಸಂಬಂಧ ಇಲ್ಲ ಎಂದರು.
ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ವಿಚಾರದಲ್ಲಿ ಸಂಸದ ಪ್ರತಾಪಸಿಂಹ ರಾಜಕಾರಣ ಮಾಡುತ್ತಿದ್ದಾರೆ. ಈ ವಿಚಾರವಾಗಿ ಸಂಸದ ಪ್ರತಾಪಸಿಂಹ ಪತ್ರ ಬರೆದು ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದ್ದಾರೆ. ನಾಲ್ವಡಿ ಹೆಸರು ನಾಮಕರಣಕ್ಕೆ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಮೂಲಕ ಕೇಂದ್ರಕ್ಕೆ ಪತ್ರ ಬರೆಸಿರುವುದಾಗಿ ತಿಳಿಸಿದ್ದಾರೆ. ಆದರೆ, ಸಿದ್ದರಾಮಯ್ಯ 2015ರಲ್ಲಿಯೇ ನಾಲ್ವಡಿ ಹೆಸರು ನಾಮಕರಣ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಅದೇ ಪತ್ರವನ್ನು ಇನ್ನೊಮ್ಮೆ ಕಳುಹಿಸುವುದಾಗಿ ಹೇಳಿದ್ದಾರೆ. ಆದರೆ, 10 ವರ್ಷಗಳಿಂದ ಸಂಸದರಾಗಿರುವ ಪ್ರತಾಪಸಿಂಹ ಸುಮ್ಮನಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹುಬ್ಬಳ್ಳಿ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವಂತೆ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಹೇಳಿಕೆ. ಅಲ್ಲದೇ, ಅವರಿಗೂ ಮತ್ತು ಮೈಸೂರಿಗೂ ಸಂಬಂಧ ಇಲ್ಲ ಎಂದು ಇದೇ ಸಂದರ್ಭ ತಿಳಿಸಿದರು.