ಮೈಸೂರು: ಬ್ಯಾಂಕಿಂಗ್ ವ್ಯವಸ್ಥೆಯನ್ನು ಡಿಜಿಟಲೈಸ್ ಮಾಡುವ ಸಲುವಾಗಿ ದೇಶದ 75 ಜಿಲ್ಲೆಗಳಲ್ಲಿ ಕರ್ನಾಟಕ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕುಗಳ ಡಿಜಿಟಲ್ ಬ್ಯಾಂಕಿಂಗ್ ಯೂನಿಟ್ಗಳನ್ನು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಸಾಮಾನ್ಯ ಜನರ ಜೀವನ ಸರಳಗೊಳಿಸಲು ಈಗ ನಡೆಯುತ್ತಿರುವ ಅಭಿಯಾನದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಹೆಚ್ಚು ಮಹತ್ವದ್ದಾಗಿದೆ. ಇದೊಂದು ವಿಶೇಷ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಸೌಲಭ್ಯವಾಗಿದ್ದು ಕನಿಷ್ಠ ಡಿಜಿಟಲ್ ಮೂಲಭೂತ ಸೌಕರ್ಯಗಳ ಮೂಲಕ ಗರಿಷ್ಠ ಸೇವೆಗಳನ್ನು ಜನರಿಗೆ ಒದಗಿಸಲಿದೆ. ಇದರಿಂದ ಬ್ಯಾಂಕಿಂಗ್ ಸೇವೆ ಕಾಗದರಹಿತವಾಗುವುದದಲ್ಲದೆ ಭ್ರಷ್ಟಾಚಾರ ಮುಕ್ತವಾಗುತ್ತದೆ. ಜತೆಗೆ ಹೆಚ್ಚು ಸುರಕ್ಷಿತವಾಗಿಯ ಇರುತ್ತದೆ ಎಂದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸೇರಿದಂತೆ ಹಲವರು ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೈಸೂರಿನ ವಿಜಯನಗರ ಒಂದನೇ ಹಂತದಲ್ಲಿ ಕರ್ಣಾಟಕ ಬ್ಯಾಂಕ್ನಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕ (ಡಿಬಿಯು) ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಅವರು ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಬಳಸಿಕೊಳ್ಳಲು ಮುಂದಾಗಬೇಕು. ಇದರಿಂದ ಸಮಯ ಉಳಿತಾಯದ ಜತೆಗೆ ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ತಲುಪುವಂತೆ ಮಾಡಲು ಶ್ರಮಿಸುತ್ತಿದೆ. ಡಿಜಿಟಲ್ ಇಂಡಿಯಾದಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ ತರುವ ಮೂಲಕ ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಮಾಡಲು ಒತ್ತು ನೀಡಿದೆ ಎಂದರು.
ಪ್ರತಿ ಐದು ಕಿ.ಮೀ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆ ನೀಡಲಾಗುತ್ತಿದೆ. ಗ್ರಾಹಕರು ಬ್ಯಾಂಕಿನಲ್ಲಿ ಸಮಯ ಕಳೆಯುವ ಬದಲಿಗೆ ಡಿಜಿಟಲ್ ವ್ಯವಹಾರ ಮಾಡಬೇಕು ಎಂದರು.
ಶಾಸಕ ರಾಮದಾಸ್ ಮಾತನಾಡಿ, ರಸ್ತೆಬದಿ ವ್ಯಾಪಾರಿಗಳು ಇಂದು ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಮಾಡುತ್ತಿದ್ದಾರೆ. ನಗರದಲ್ಲಿ ನೊಂದಾಯಿಸಿಕೊಂಡಿರುವ 10,500 ರಸ್ತೆಬದಿ ವ್ಯಾಪಾರಿಗಳಲ್ಲಿ ಕೃಷ್ಣರಾಜ ಕ್ಷೇತ್ರದವರು 3,500 ಮಂದಿ ಇದ್ದಾರೆ. ತರಕಾರಿ ವ್ಯಾಪಾರ ಮಾಡುವವರು ಇಂದು ಆನ್ಲೈನ್ ಪೇಮೆಂಟ್ ಪಡೆಯುತ್ತಿದ್ದಾರೆ. ಇದು ಸಾಧ್ಯವಾಗಿದ್ದು ಟಿಜಿಟಲ್ ಬ್ಯಾಂಕಿಂಗ್ನಿಂದ ಎಂದು ಹರ್ಷ ವ್ಯಕ್ತಪಡಿಸಿದರು.