ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೂ.20 ಮತ್ತು 21ರಂದು ಎರಡು ದಿನಗಳ ಮೈಸೂರು ಭೇಟಿ ಹಿನ್ನೆಲೆಯಲ್ಲಿ ವಿಶೇಷ ಭದ್ರತಾ ಪಡೆ (ಎಸ್ಪಿಜಿ) ಮತ್ತು ಪೊಲೀಸ್ ಅಧಿಕಾರಿಗಳು ಕೆಲವು ಸ್ಥಳಗಳಲ್ಲಿ ಭದ್ರತಾ ಪರಿಶೀಲನೆ ನಡೆಸಿದರು.
ಅಡಿಷನಲ್ ಇನ್ಸ್ಪೆಕ್ಟರ್ ಜನರಲ್ ತಂಡದ 7 ಸಿಬ್ಬಂದಿ ಮತ್ತು ಎಸ್ಪಿಜಿ ಟೀಂ ಮೈಸೂರು ಅರಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬಳಿಕ ನಗರ, ಗ್ರಾಮಾಂತರ ವಿಭಾಗಗಳ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಅರಮನೆ ಆವರಣದಲ್ಲಿ ವೇದಿಕೆ ನಿರ್ಮಾಣ, ಆವರಣದಲ್ಲಿ ಯೋಗ ಕಾರ್ಯಕ್ರಮಕ್ಕೆ ಕೈಗೊಂಡಿರುವ ಸಿದ್ಧತೆಗಳನ್ನು ವೀಕ್ಷಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಭೇಟಿ ವೇಳೆ ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕು. ಕಾರ್ಯಕ್ರಮಗಳಲ್ಲಿ ಹೆಚ್ಚಿನ ಭದ್ರತೆ ಮಾಡಬೇಕು. ಪ್ರಧಾನಿ ಸಂಚರಿಸುವ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಪ್ರಧಾನಿಯವರು ನಗರದಿಂದ ತೆರಳುವ ತನಕ ಭದ್ರತೆಗೆ ವಿಶೇಷ ನಿಗಾವಹಿಸಬೇಕು ಎಂದು ತಿಳಿಸಿದರು.
ಪ್ರಧಾನಿ ಭದ್ರತೆಗೆ 20 ಎಸ್ಪಿಜಿ, ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ಜಿ) ಸಿಬ್ಬಂದಿ ಸೇರಿ ಒಟ್ಟು 47 ಸಿಬ್ಬಂದಿ ನಿಯೋಜಿಸಲಾಗಿದೆ. ಶೀಘ್ರದಲ್ಲಿ ಎಸ್ಪಿಜಿ 20 ಸಿಬ್ಬಂದಿಗೆ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಕೈಗೊಳ್ಳಬೇಕಿರುವ ಭದ್ರತಾ ಕ್ರಮಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.
ಬಳಿಕ ಪ್ರಧಾನಿ ಭೇಟಿ ನೀಡಲಿರುವ ಮಂಡಕಳ್ಳಿ ವಿಮಾನ ನಿಲ್ದಾಣ, ರ್ಯಾಡಿಸನ್ ಬ್ಲೂ ಪ್ಲಾಜಾ, ಚಾಮುಂಡಿ ಬೆಟ್ಟ, ದಸರಾ ವಸ್ತು ಪ್ರದರ್ಶನದ ಆವರಣ, ಮಹಾರಾಜ ಕಾಲೇಜು, ಆಯುಷ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಭದ್ರತಾ ಸಭೆ: ಪ್ರಧಾನ ಮಂತ್ರಿ ಭೇಟಿಗೆ ಮೂರು ದಿನಗಳಿಗೆ ಮುನ್ನ ಭದ್ರತಾ ಸಭೆಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಎಸ್ಪಿಜಿ ಅಧಿಕಾರಿಗಳು, ಗುಪ್ತಚರ ಇಲಾಖೆ, ರಾಜ್ಯ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಭೆಗೂ ಮುನ್ನ ಎಸ್ಪಿಜಿ ಅಧಿಕಾರಿಗಳು ಅರಮನೆಗೆ ಭೇಟಿ ನೀಡಿದ ವೇಳೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಈವರೆಗೆ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ವಿವರಿಸಿದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಡಿಸಿಪಿಗಳಾದ ಪ್ರದೀಪ್ ಗುಂಟಿ, ಎಂ.ಎಸ್.ಗೀತಾ ಪ್ರಸನ್ನ, ಅಗ್ನಿಶಾಮಕ ದಳ, ನಗರ ಪಾಲಿಕೆ, ಮುಡಾ, ಸೆಸ್ಕ್, ಕೃಷಿ ಮತ್ತು ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಎಸ್ಪಿಜಿ ಸಿಬ್ಬಂದಿ ಕಾರ್ಯಕ್ರಮಗಳು ನಡೆಯಲಿರುವ ಸ್ಥಳವನ್ನು ವಶಕ್ಕೆ ಪಡೆಯಲಿದ್ದಾರೆ. ಬಳಿಕ ಸ್ಯಾನಿಟೈಸೇಷನ್, ಶ್ವಾನದಳ, ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿ ತಪಾಸಣೆ ಮಾಡಲಿದ್ದಾರೆ.