News Karnataka Kannada
Friday, May 03 2024
ಮೈಸೂರು

ದಸರಾ ಅಖಾಡದಲ್ಲಿ ಧೂಳೆಬ್ಬಿಸುತ್ತಿರುವ ಫೈಲ್ವಾನರು

Phailwans throw dust at Dussehra arena
Photo Credit : News Kannada

ಮೈಸೂರು: ಮೈಸೂರು ದಸರಾ ಹಿನ್ನಲೆಯಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಯಲ್ಲಿ ಕುಸ್ತಿಪಟುಗಳು ಧೂಳೆಬ್ಬಿಸುತ್ತಿದ್ದಾರೆ. ಗೆಲುವಿಗಾಗಿ ಕಾದಾಡುತ್ತಿರುವ ಫೈಲ್ವಾನ್ ಗಳನ್ನು ನೋಡುವುದೇ ಒಂಥರಾ ಮಜಾವಾಗಿದೆ. ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಬಂದಿರುವ ಫೈಲ್ವಾನ್ ಗಳು ಗೆದ್ದೇ ಗೆಲ್ಲಬೇಕೆಂಬ ಛಲದಲ್ಲಿ ಅಖಾಡಕ್ಕಿಳಿಯುತ್ತಿದ್ದಾರೆ.

ಅ.15ರಿಂದ ಆರಂಭವಾಗಿರುವ ಕುಸ್ತಿ ಪಂದ್ಯಾವಳಿ ವಿವಿಧ ವಿಭಾಗಗಳಲ್ಲಿ ಅ.21ರವರೆಗೂ ನಡೆಯಲಿದೆ. ಪಂದ್ಯಾವಳಿಯಲ್ಲಿ ದಸರಾ ನಾಡಕುಸ್ತಿ, ಪಂಜಕುಸ್ತಿ ಮತ್ತು ಪಾಯಿಂಟ್ ಕುಸ್ತಿಗಳು ನಡೆಯುತ್ತಿದ್ದು, ಈ ಬಾರಿ ವಿಶೇಷವಾಗಿ ದಸರಾ ಕಿಶೋರ(57 ರಿಂದ65 ಕೆ.ಜಿ.) ಮತ್ತು ದಸರಾ ಕಿಶೋರಿ(57 ರಿಂದ 62 ಕೆ.ಜಿ) ಪ್ರಶಸ್ತಿಗಳಿಗಾಗಿ ಕುಸ್ತಿ ಆಡಿಸಲಾಗುತ್ತಿದೆ.

ಮೈಸೂರು ವಿಭಾಗ ಮಟ್ಟದ ಪಾಯಿಂಟ್ ಕುಸ್ತಿಯಲ್ಲಿ ಮೈಸೂರು ದಸರಾ ಕುಮಾರ (74 ಕೆ.ಜಿ ಮೇಲ್ಪಟ್ಟು) ಪ್ರಶಸ್ತಿ ನೀಡಲಾಗುತ್ತದೆ. ಉಳಿದಂತೆ, ದಸರಾ ಕಂಠೀರವ (86 ಕೆ.ಜಿ.ಮೇಲ್ಪಟ್ಟು), ದಸರಾ ಕೇಸರಿ (74 ರಿಂದ 86 ಕೆ.ಜಿ.ವರೆಗೆ) ಕುಸ್ತಿಗಳು ನಡೆಯಲಿವೆ. ನಾಡಕುಸ್ತಿ ಜತೆಗೆ, ಮೈಸೂರು ವಿಭಾಗ ಮಟ್ಟದ ಪುರುಷರ ಫ್ರೀ ಸ್ಟೈಲ್ ಕುಸ್ತಿ, ರಾಜ್ಯ ಮಟ್ಟದ ಮಹಿಳೆಯರ ಕುಸ್ತಿ, ಪುರುಷರ ಫ್ರೀ ಸ್ಟೈಲ್ ಕುಸ್ತಿಗಳು ನಡೆಯಲಿವೆ.

ದಸರಾ ಕಂಠೀರವ, ದಸರಾ ಕೇಸರಿ, ದಸರಾ ಕುಮಾರ, ದಸರಾ ಕಿಶೋರಿ ಮತ್ತು ದಸರಾ ಕಿಶೋರ ಪ್ರಶಸ್ತಿಗಳಿಗೆ ಕ್ರಮವಾಗಿ 1.25 ಕೆ.ಜಿ, 1 ಕೆ.ಜಿ, 0.75 ಕೆ.ಜಿ., 0.50 ಕೆ.ಜಿ. ಮತ್ತು 0.50 ಕೆ.ಜಿ. ತೂಕದ ಬೆಳ್ಳಿ ಗದೆಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಅ.18ರಂದು ಮಹಿಳೆಯರು, ಪುರುಷರು ಮತ್ತು ಅಂಗವಿಕಲರ ವಿಭಾಗದಲ್ಲಿ ಪಂಜಕುಸ್ತಿ ನಡೆಯಲಿದೆ.

ದಸರಾದಲ್ಲಿ ಈ ರೀತಿಯ ಕುಸ್ತಿ ಪಂದ್ಯಾವಳಿಯನ್ನು ಆಡಿಸಲಾಗುತ್ತದೆ ಎಂದ ಮೇಲೆ ಮೈಸೂರು ದಸರಾಕ್ಕೂ ಕುಸ್ತಿಗೂ ನಂಟಿದೆ ಎನ್ನುವುದು ಗೊತ್ತಾಗಿ ಬಿಡುತ್ತದೆ. ಅಷ್ಟೇ ಅಲ್ಲದೆ ಈ ಕುಸ್ತಿ ಪಂದ್ಯಾವಳಿಗಳಿಗೆ ರಾಜಮಹಾರಾಜರ ಕಾಲದ ಇತಿಹಾಸವಿರುವುದು ಅರಿವಾಗುತ್ತದೆ. ರಾಜರ ಕಾಲದಲ್ಲಿ ಪೈಲ್ವಾನ್‌ರನ್ನು ಕರೆಸಿ ಪ್ರತಿ ವಾರವೂ ಕುಸ್ತಿ ನಡೆಸಲಾಗುತ್ತಿತ್ತು. ಅಲ್ಲದೆ, ದಸರಾ ಸಂದರ್ಭ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯುತ್ತಿದ್ದ ವಜ್ರಮುಷ್ಠಿ ಕಾಳಗ ಖ್ಯಾತಿ ಪಡೆದಿತ್ತು ಎಂಬುದು ಇತಿಹಾಸದ ಸತ್ಯವಾಗಿದೆ.

ಇನ್ನು ಪೈಲ್ವಾನರಿಗೆ ರಾಜರೇ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಮೈಸೂರು ನಗರದಾದ್ಯಂತ ಗರಡಿಮನೆಗಳು ಹುಟ್ಟಿಕೊಂಡಿದ್ದವು. ಮುಂಜಾನೆ ಚುಮುಚುಮು ಚಳಿಯಲ್ಲಿಯೇ ಗರಡಿ ಮನೆಗೆ ಹೋಗಿ ಅಭ್ಯಾಸ ನಡೆಸುತ್ತಿದ್ದರು. ದಸರಾ ಸಂದರ್ಭ ನಡೆಯುವ ಕುಸ್ತಿ ಪಂದ್ಯದಲ್ಲಿ ತನ್ನ ಬಲ ಪ್ರದರ್ಶಿಸಿ ಮಹಾರಾಜರಿಂದ ಪ್ರಶಂಸೆ ಪಡೆಯುತ್ತಿದ್ದರು..

ಇವತ್ತಿಗೂ ಮೈಸೂರು ನಗರದಲ್ಲಿ ಹತ್ತು ಹಲವು ಗರಡಿಮನೆಗಳಿದ್ದು ಈ ಪೈಕಿ ಸುಣ್ಣದಕೇರಿ ನಾಲಾ ಬೀದಿಯ ಗೋಪಾಲಸ್ವಾಮಿ ಗರಡಿ, ಬಸವೇಶ್ವರ ರಸ್ತೆಯ ಮಹಾಲಿಂಗೇಶ್ವರ ಮಠದ ಗರಡಿ, ಕೆ.ಜಿ.ಕೊಪ್ಪಲು, ಪಡುವಾರಹಳ್ಳಿಯ ಹತ್ತೂ ಜನರ ಗರಡಿ, ಹುಲ್ಲಿನ ಬೀದಿಯ ಈಶ್ವರರಾಯನ ಗರಡಿ, ಫಕೀರ್ ಅಹಮ್ಮದ್ ಸಾಹೇಬರ ಗರಡಿ ಹೀಗೆ ಗರಡಿ ಮನೆಗಳ ಹೆಸರು ಮುಂದುವರೆಯುತ್ತಾ ಹೋಗುತ್ತದೆ. ಇಂತಹ ಗರಡಿಮನೆಗಳಿಂದ ಬೆಟ್ಟದ ಚಿಕ್ಕಣ್ಣ, ಪೈ.ಪಾಪಣ್ಣ, ಪೈ.ಶಂಕರ್ ಚಕ್ರವರ್ತಿ, ಚಿನ್ನ, ಅನಂತ್ ಅವರಂತಹ ನೂರಾರು ಪೈಲ್ವಾನ್‌ಗಳು ಪ್ರತಿಭೆ ಪ್ರದರ್ಶಿಸಿ ಮೈಸೂರಿನ ಖ್ಯಾತಿಯನ್ನು ಹಸಿರಾಗಿಸಿದ್ದಾರೆ.

ಇವತ್ತಿನ ದಿನಗಳಲ್ಲಿ ಜಿಮ್ ಬಂದಿದ್ದು ಗರಡಿಮನೆಗಳಿಗೆ ತೆರಳುವವರ ಸಂಖ್ಯೆ ಕಡಿಮೆಯಾಗಿರಬಹುದು ಆದರೆ ಅದರ ಘನತೆ ಗೌರವ ಕಡಿಮೆಯಾಗಿಲ್ಲ. ಅದನ್ನು ಉಳಿಸಿ ಬೆಳೆಸಿಕೊಂಡು ಬರುವರು ಇಂದಿಗೂ ಇದ್ದಾರೆ. ಹೀಗಾಗಿಯೇ ಇಂದಿಗೂ ದಸರಾದಲ್ಲಿ ಕುಸ್ತಿ ಪಂದ್ಯಾವಳಿಗೆ ತನ್ನದೇ ಆದ ಸ್ಥಾನಮಾನವಿದ್ದು, ಕುಸ್ತಿಗಾಗಿ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು