ಪಿರಿಯಾಪಟ್ಟಣ: ಗಿರಿಜನ ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳು ಶಾಸಕರ ಬೆಂಬಲಿಗರು ಎಂಬ ಕಾರಣಕ್ಕೆ ಪೊಲೀಸರು ಇಲ್ಲಿಯವರೆಗೂ ಬಂಧಿಸಿಲ್ಲ ಎಂದು ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಕಾರ್ಯಕರ್ತರು ಆರೋಪಿಸಿದ್ದಾರೆ.
ಪಟ್ಟಣದ ತಾಲೂಕು ಆಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ವೇದಿಕೆ ಕಾರ್ಯಕರ್ತರು ತಾಲೂಕಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆ ಮುಖಂಡ ಟಿ.ಈರಯ್ಯ ಅವರು ಮಾತನಾಡಿ ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಶನಿವಾರ ಬೆಮ್ಮತ್ತಿ ಗ್ರಾಮದ ಗಿರಿಜನ (ಸೋಲಿಗ) ಮಹಿಳೆಯರಾದ ಲಕ್ಷ್ಮಿ ಜಯಮ್ಮ ಶೋಭಾ ಸೇರಿದಂತೆ ಮೂವರು ಮಹಿಳೆಯರ ಮೇಲೆ ಹುಣಸುವಾಡಿ ಗ್ರಾಮ ಪಂಚಾಯಿತಿ ಸದಸ್ಯ ಜೆಡಿಎಸ್ ಮುಖಂಡ ಲೋಕೇಶ್ ಮತ್ತು ಆತನ ಸಂಬಂಧಿಕ ಕುಳ್ಳ ಎಂಬವರು ದೊಣ್ಣೆಯಿಂದ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ದೌರ್ಜನ್ಯವೆಸಗಿದ್ದಾರೆ.
ಘಟನೆ ನಡೆದ ತಕ್ಷಣ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳನ್ನು ಕೂಡಲೇ ಸಂಪರ್ಕ ಮಾಡಿ ಹೇಳಿಕೆ ಪಡೆದು ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕಿತ್ತು ಆದರೆ ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದು ವಿಳಂಬವಾಗಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿದರೆ ವಿನಃ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಬರುವ ಯಾವ ನಿಯಮವನ್ನು ಪಾಲಿಸದೆ ಆರೋಪಿಗಳನ್ನು ಇಲ್ಲಿಯವರೆವಿಗೂ ಬಂಧಿಸಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ತಹಸೀಲ್ದಾರ್ ಕೆ.ಚಂದ್ರಮೌಳಿ ರವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಮುಖಂಡರಾದ ಎಚ್.ಡಿ ರಮೇಶ್, ಪಿ.ಪಿ ಪುಟ್ಟಯ್ಯ, ಕೆ.ಬಿ ಮೂರ್ತಿ, ರಂಗಸ್ವಾಮಿ, ಪ್ರಕಾಶ್, ಕುಮಾರ್, ಆರ್.ಡಿ ಚಂದ್ರು, ಉತ್ತೇನಹಳ್ಳಿ ವೆಂಕಟೇಶ್, ಭೈರಪ್ಪ, ಅಣ್ಣಯ್ಯ. ಸಿಆರ್ ಮಂಜು. ಚೆನ್ನಯ್ಯ. ದೇವಯ್ಯ, ಎಚ್.ಬಿ ಮುನಿಯಪ್ಪ ಮತ್ತಿತರಿದ್ದರು.