ಮೈಸೂರು: ನಗರದಲ್ಲಿರುವ ಗೋಕುಲಂ ಬಡಾವಣೆಯಲ್ಲಿರುವ ಆದಿತ್ಯ ಅಧಿಕಾರಿ ಆಸ್ಪತ್ರೆಗೆ ಬೀಗ ಹಾಕುವಂತೆ ಮತ್ತು ವೈದ್ಯ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ತಕ್ಷಣ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ.
ರವಿಗೌಡ ದೊಡ್ಡಪ್ಪ ಶಿವಣ್ಣ ಎಂಬುವರು ಅಪಘಾತದಲ್ಲಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆದಿತ್ಯ ಅಧಿಕಾರಿ ಆಸ್ಪತ್ರೆಗೆ ದಾಖಲಾಗಿತ್ತು. ಒಂದು ಆಪರೇಷನ್ಗಾಗಿ ನಾಲ್ಕು ತಿಂಗಳು ಚಿಕಿತ್ಸೆ ನೀಡಲಾಗಿತ್ತು. ಆಪರೇಷನ್ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಶಿವಣ್ಣ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರಿನ ರವಿಗೌಡ ಎಂಬುವರು ಆರೋಗ್ಯ ಇಲಾಖೆಯ ಜಾಗೃತಕೋಶದ ಜಾಗೃತಾಧಿಕಾರಿಗೆ ದೂರು ನೀಡಿದ್ದರು. ವೈದ್ಯರ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಸಬೇಕು ಮತ್ತು ಆಸ್ಪತ್ರೆಯನ್ನು ಬಂದ್ ಮಾಡಿಸಿಬೇಕೆಂದು ದೂರಿನಲ್ಲಿ ದಾಖಲಿಸಿದ್ದರು.
ಈ ಸಂಬಂಧ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಡಾ.ಚಂದ್ರಶೇಖರ್ ವಿರುದ್ಧ ತನಿಖೆ ನಡೆಸಲು ಆದೇಶಿಸಿತ್ತು. ತನಿಖೆ ವೇಳೆ ವೈದ್ಯ ಚಂದ್ರಶೇಖರ್ ಲೋಪ ಎಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಮೃತ ಕುಟುಂಬಸ್ಥರಿಗೆ 15 ಲಕ್ಷದ 60 ಸಾವಿರ ರೂ. ಪರಿಹಾರ ನೀಡುವಂತೆ 2023 ರ ಆಗಸ್ಟ್ 8 ರಂದು ಆದೇಶ ಹೊರಡಿಸಲಾಗಿತ್ತು.