ನಂಜನಗೂಡು: ಇಲ್ಲಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮುಳ್ಳೂರು, ಕುಳ್ಳಂಕನಹುಂಡಿ, ಹೊರಳವಾಡಿ, ಹೊಸೂರು, ಬಸವೇಶ್ವರ ನಗರ, ಸಿಂಗಾರಿಪುರ, ಶ್ರೀನಗರ, ಹೆಡತಲೆ ಗ್ರಾಮಗಳಲ್ಲಿ ಗುರುವಾರ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್ ಅವರು ಮತಯಾಚನೆ ಮಾಡಿದರು.
ನಂತರ ಸಿಂಗಾರಿಪುರ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ದರ್ಶನ್ ಧ್ರುವನಾರಾಯಣ್ ಅವರು, ಈ ಭಾಗದಿಂದಲೇ ಎರಡು ಬಾರಿ ಸಂಸತ್ ಸದಸ್ಯರಾಗಿದ್ದ ನಮ್ಮ ತಂದೆ ದಿವಂಗತ ಆರ್.ಧ್ರುವನಾರಾಯಣ್ ಅವರು ಉತ್ತಮ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುವುದರ ಮೂಲಕ ಈ ಕ್ಷೇತ್ರದಲ್ಲಿ ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದರು. ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಬೇಕು ಎಂಬ ಕನಸು ಕಂಡಿದ್ದರು. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತರೂ ಜನರ ಸೇವೆ ಮಾಡುವುದನ್ನು ಮುಂದುವರೆಸಿದ್ದರು. ಆದರೆ ಕಳೆದ ತಿಂಗಳು ಕೆಲವೇ ದಿನಗಳ ಅಂತರದಲ್ಲಿ ನಮ್ಮ ಕುಟುಂಬದಲ್ಲಿ ಆದ ನಮ್ಮ ತಂದೆ-ತಾಯಿ ಸಾವು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಸಾವಿನ ನೋವಿನಿಂದ ಈಗಲೂ ನಮ್ಮ ಕುಟುಂಬ ಹೊರ ಬರಲು ಸಾಧ್ಯವಾಗಿಲ್ಲ ಎಂದು ನೋವು ತೋಡಿಕೊಂಡರು.
ಕ್ಷೇತ್ರದಲ್ಲಿ ನಮ್ಮ ತಂದೆಯಂತೆಯೇ ಏನೇ ಸಮಸ್ಯೆ ಬಂದರೂ ಅದನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಕಾಂಗ್ರೆಸ್ ಅಭ್ಯರ್ಥಿಯಾದ ನನಗೆ ಬೆಂಬಲ ನೀಡುವುದರ ಮೂಲಕ ಜಯಶಾಲಿ ಮಾಡಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಕ್ಷೇತ್ರ ಉಸ್ತುವಾರಿಗಳಾದ ಶ್ರೀಕಂಠು, ಕೆಪಿಸಿಸಿ ಕಾರ್ಯದರ್ಶಿಗಳಾದ ಕಾವೇರಿಯಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಅಧ್ಯಕ್ಷರಾದ ಲತಾ ಸಿದ್ದಶೆಟ್ಟಿ, ಉಪ್ಪಾರ ಸಮುದಾಯದ ಮುಖಂಡರಾದ ಸಿದ್ದಶೆಟ್ಟಿ, ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಕುರಟ್ಟಿ ಮಹೇಶ್ ರವರು, ಶ್ರೀಕಂಠನಾಯಕ, ಸಿಂಗಾರಿಪುರ ನಾಗರಾಜ್, ದೊರೆಸ್ವಾಮಿ ನಾಯಕ ಶಿವಪ್ಪ ದೇವರು,ಯುವ ಕಾಂಗ್ರೆಸ್ ನ ಅಧ್ಯಕ್ಷರಾದ ದೇಬೂರು ಅಶೋಕ್, ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಮುಳ್ಳೂರು ಗ್ರಾಮದಲ್ಲಿ ಹಲವು ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.