ನಂಜನಗೂಡು: ಎರಡು ದಿನಗಳ ಹಿಂದೆ ಕಪಿಲಾ ನದಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಹೆಜ್ಜಿಗೆ ಸೇತುವೆ ಬಳಿ ಪತ್ತೆಯಾಗಿದೆ.
ಎರಡು ದಿನಗಳ ಕಾಲ ನಡೆದ ನಿರಂತರ ಶೋಧ ಕಾರ್ಯದಲ್ಲಿ ಮೃತದೇಹ ಕಂಡು ಬಂದಿದೆ. ಮೃತದೇಹ ಪತ್ತೆಯಾಗುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದು ಆಕಸ್ಮಿಕ ಅಲ್ಲ ಸಂಚು ರೂಪಿಸಿ ಕೊಲೆ ಎಂದು ಮೃತ ಯುವಕ ಅಬ್ದುಲ್ ರಹೀಮಾ ಪಾಷ ತಂದೆ ಮುನಾವರ್ ಪಾಷಾ ಆರೋಪ ಮಾಡಿದ್ದರು
ನಂಜನಗೂಡು ತಾಲ್ಲೂಕು ಹೆಜ್ಜಿಗೆ ಗ್ರಾಮದ ಕಪಿಲಾ ನದಿಯಲ್ಲಿ ಇಬ್ಬರು ಸ್ನೇಹಿತರೊಂದಿಗೆ ಈಜಲು ಹೋಗಿ ಅಬ್ದುಲ್ ರಹೀಂ ಪಾಷಾ ನಾಪತ್ತೆಯಾಗಿದ್ದರು. ಇಂದು ಮೃತದೇಹ ದೊರೆತಿದೆ. ಪ್ರಕರಣದ ಹಿಂದೆ ಮೃತನ ತಂದೆ ಕೊಲೆ ಸಂಚಿನ ಅನುಮಾನ ವ್ಯಕ್ತಪಡಿಸಿದ್ದಾರೆ.
ತುಂಬಿ ತುಳುಕುತ್ತಿರುವ ಕಪಿಲಾ ನದಿಗೆ ಬಿದ್ದಿದ್ದ ಅಬ್ದುಲ್ ಸೇರಿ ಮೂವರು ಯುವಕರಲ್ಲಿ ಇಬ್ಬರು ಈಜಿ ದಡ ಸೇರಿದ್ದರು. ಮಗನನ್ನು ಸಮಯ ನೋಡಿ ಕೊಲೆ ಮಾಡಿದ್ದಾರೆ.ಆತ ಬಟ್ಟೆ ಚಪ್ಪಲಿ ಬಿಚ್ಚದೆ ನೀರಿಗೆ ಬಿದ್ದಿದ್ದಾನೆ. ಈ ಹಿಂದೆ ಒಮ್ಮೆ ಕೊಲೆ ಯತ್ನ ನಡೆದಿದೆ. ಯಾವತ್ತಿದ್ರೂ ಮುಗಿಸ್ತೀನಿ ಅಂತ ಎಚ್ಚರಿಕೆ ಕೊಟ್ಟಿದ್ರು. ಆತನ ಜೊತೆಯವರೇ ಕೊಲೆ ಮಾಡಲು ಈ ರೀತಿ ಮಾಡಿದ್ದಾರೆಂದು ಮೃತನ ತಂದೆ ಮುನಾವರ್ ಪಾಷ ಗಂಭೀರ ಆರೋಪ ಮಾಡಿದ್ದರು.
ಇದೀಗ ಪೊಲೀಸರ ತನಿಖೆಯಿಂದ ಸತ್ಯಾಂಶ ತಿಳಿಯಬೇಕಿದೆ ಈಗಾಗಲೇ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ವಿಚಾರವಾಗಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಯುವಕನ ಶವವನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.