ಮೈಸೂರು: ನಗರದ ಚಾಮುಂಡಿ ಬೆಟ್ಟದಲ್ಲಿ ಸೋಮವಾರ ನಡೆದ ಯೋಗಾಚರಣೆ ಹಾಗೂ ದುರ್ಗಾ ನಮಸ್ಕಾರದಲ್ಲಿ ನೂರಾರು ಯೋಗಾಸಕ್ತರು ಪಾಲ್ಗೊಂಡಿದ್ದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ನಾಡ ಹಬ್ಬ ಮೈಸೂರು ದಸರಾ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿ, ಯೋಗವನ್ನು ಭಾರತೀಯರು ತಮ್ಮ ಹಿರಿಯರಿಂದ ಸಾಂಪ್ರದಾಯಿಕವಾಗಿ ಪಡೆದಿದ್ದಾರೆ. ಯೋಗಾಸನವನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಯೋಗ ದಸರಾ ಸೇರಿದಂತೆ ಎಲ್ಲಾ ದಸರಾ ಸಂಬಂಧಿತ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಬೆಟ್ಟಕ್ಕೆ 1000 ಮೆಟ್ಟಿಲುಗಳನ್ನು ಹತ್ತಿದ ನಂತರ ಯೋಗಾಸಕ್ತರು ಆಸನಗಳನ್ನು ಪ್ರದರ್ಶಿಸಿದ್ದಾರೆ. ಸೆಪ್ಟೆಂಬರ್ 26 ರಿಂದ ಇಂದಿನವರೆಗೆ ಪ್ರತಿದಿನ ಯೋಗಾಸನ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಸೋಮಶೇಖರ್ ತಿಳಿಸಿದರು.
ಈ ಬಾರಿಯ ದಸರಾ ಅದ್ಧೂರಿಯಾಗಿ ನಡೆಯಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಬಹುತೇಕ ಎಲ್ಲಾ ಕಾರ್ಯಕ್ರಮಗಳು ಇಂದು ಮುಕ್ತಾಯಗೊಳ್ಳಲಿವೆ. ಮಂಗಳವಾರದಿಂದಲೇ ಜಂಬೂ ಸವಾರಿ ಮೆರವಣಿಗೆಗೆ ಸಿದ್ಧತೆಗಳು ಆರಂಭವಾಗಲಿವೆ ಎಂದರು.
ಮುಖ್ಯಮಂತ್ರಿ ಕೂಡ ಮಂಗಳವಾರ ನಗರಕ್ಕೆ ಆಗಮಿಸಲಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗಲಿಲ್ಲ. ಉನ್ನತಾಧಿಕಾರ ಸಮಿತಿಯ ನಿರ್ಣಯಗಳನ್ನು ಪಾಲಿಸಿ ವಾರ್ಷಿಕ ಉತ್ಸವವನ್ನು ಆಚರಿಸಲಾಗುತ್ತಿದೆ. ಅಧಿಕಾರಿಗಳು ಕೂಡ ಸಮಾನವಾಗಿ ಸ್ಪಂದಿಸುತ್ತಿದ್ದಾರೆ ಎಂದು ಸೋಮಶೇಖರ್ ಹೇಳಿದರು.