News Karnataka Kannada
Wednesday, May 01 2024
ಮೈಸೂರು

ಮೈಸೂರು: 34.50 ಕೋಟಿ ರೂ. ವೆಚ್ಚದಲ್ಲಿ ಮೈಸೂರು ದಸರಾ

Mysore (1)
Photo Credit : By Author

ಮೈಸೂರು: ಐತಿಹಾಸಿಕ ಮೈಸೂರು ದಸರಾವನ್ನು 34.50 ಕೋಟಿ ರೂ. ವೆಚ್ಚದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದ್ದು, ಎಲ್ಲ ವೆಚ್ಚವನ್ನು ಅದರೊಳಗೆ ಭರಿಸಲು ತೀರ್ಮಾನ ಕೈಗೊಂಡಿರುವುದಾಗಿ ಹೇಳಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ಅವರು, ದಸರಾಕ್ಕಾಗಿ ಅರಮನೆ ಮಂಡಳಿಯಿಂದ ರೂ.5 ಕೋಟಿ, ಮುಡಾದಿಂದ 10 ಕೋಟಿ ಮತ್ತು ಸರ್ಕಾರದಿಂದ 15 ಕೋಟಿ ನೀಡಲಾಗುತ್ತಿದೆ, ಸೆಸ್ಕ್‌ಗೆ ವಿದ್ಯುತ್ ದೀಪಾಲಂಕಾರಕ್ಕಾಗಿ 4.50 ಕೋಟಿ ರೂ ಮತ್ತು ಉಪ ಸಮಿತಿಗಳಿಗೆ ಹಂಚಲಾಗಿದೆ ಎಂದು ತಿಳಿಸಿದರು. ಈಗ ನಿಗದಿ ಮಾಡಿರುವ ಹಣದಲ್ಲಿಯೇ ದಸರಾ ಉತ್ಸವ ಮುಗಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಜತೆಗೆ ಈ ಹಿಂದಿನಂತೆ ತಡ ಮಾಡದೆ, ಉತ್ಸವ ಮುಗಿದ ಕೆಲವೇ ದಿನಗಳಲ್ಲಿ ಖರ್ಚು ವೆಚ್ಚದ ಲೆಕ್ಕ ನೀಡಲಾಗುವುದಾಗಿ ತಿಳಿಸಿದರು.

ಪ್ರತಿ ವರ್ಷವೂ ಪಾಸ್ ವಿತರಣೆ ವಿಚಾರದಲ್ಲಿ ಗೊಂದಲ ಏರ್ಪಡುತ್ತಿದ್ದು, ಅದರ ನಿವಾರಣೆಗೆ ಕ್ರಮ ಕೈಗೊಂಡಿದ್ದು ಯಾವುದೇ ರೀತಿಯ ಸಮಸ್ಯೆ, ಗೊಂದಲಗಳಿಗೆ ಎಡೆ ಮಾಡದಂತೆ ನೋಡಿಕೊಳ್ಳಲಾಗುತ್ತದೆ. ಎಂದಿನಂತೆ ಈ ಬಾರಿಯೂ ಗೋಲ್ಡ್ ಕಾರ್ಡ್ ಇರಲಿದೆ. ಅರಮನೆ ಆವರಣದಲ್ಲಿ ಜಂಬೂಸವಾರಿ ಹಾಗೂ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ವೀಕ್ಷಣೆಗೆ ಆಸನಗಳಿರುವಷ್ಟು ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ ಎಂದು ಹೇಳಿದರು.

ಉಪ ಸಮಿತಿಗಳಿಗೆ ಅಧಿಕಾರೇತರ ಅಧ್ಯಕ್ಷರು, ಸದಸ್ಯರನ್ನು ನೇಮಿಸುವ ಕುರಿತು ಯೋಚಿಸಿಲ್ಲ. ಆ ಬಗ್ಗೆ ಯಾವುದೇ ಮನವಿಗಳು ಬಂದಿಲ್ಲ. ಉದ್ಘಾಟನೆಯ ಆಹ್ವಾನ ಪತ್ರಿಕೆಯನ್ನು ಪ್ರತಿ ವರ್ಷ ಕನ್ನಡದಲ್ಲಿ ಮುದ್ರಿಸುವುದು ವಾಡಿಕೆ. ಈ ಬಾರಿ ರಾಷ್ಟ್ರಪತಿಯವರ ಮಾಹಿತಿಗಾಗಿ ಇಂಗ್ಲಿಷ್ ನಲ್ಲಿ ಮುದ್ರಿಸಲಾಗುವುದು. ಶೀಘ್ರದಲ್ಲೇ ದೆಹಲಿಗೆ ಹೋಗಿ ಅಧಿಕೃತವಾಗಿ ಅವರಿಗೆ ಆಮಂತ್ರಣ ನೀಡಲಾಗುವುದು.

ಸೆ.26ರಂದು ಸಂಜೆ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಅ.3ರವರೆಗೆ ನಡೆಯಲಿದೆ. 900 ಅರ್ಜಿಗಳು ಬಂದಿದ್ದು, ಅದರಲ್ಲಿ 280 ಕಾರ್ಯಕ್ರಮಗಳಿಗೆ ಅವಕಾಶ ಕೊಡಲಾಗುತ್ತದೆ. ಸಂಜೆ 6ರಿಂದ 10ರವರೆಗೆ, ತಲಾ 1ಗಂಟೆಯಂತೆ 4 ಕಾರ್ಯಕ್ರಮಗಳಿರಲಿವೆ. 3 ವರ್ಷದಿಂದ ಪಾಲ್ಗೊಂಡಿಲ್ಲದವರಿಗೆ, ಸ್ಥಳೀಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಕಲಾವಿದರಿಗೆ ವೇದಿಕೆ ನೀಡಲಾಗುವುದು.

ನಗರದ 124 ಕಿ.ಮೀ. ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರವಿರಲಿದೆ. 96 ವೃತ್ತಗಳನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಸಂಸತ್ತಿನ ಭವನ ಹಾಗೂ ಚಿತ್ರನಟ ಪುನೀತ್ ರಾಜ್ಕುಮಾರ್ ಅವರ ಪ್ರತಿರೂಪಗಳನ್ನು ದೀಪಗಳಲ್ಲಿ ಮಾಡಲಾಗುತ್ತದೆ. 23 ಕಡೆಗಳಲ್ಲಿ ದಸರೆಗೆ ಸ್ವಾಗತ ಫಲಕಗಳಿರಲಿವೆ. ಜಂಬೂಸವಾರಿ ಸಾಗುವ ಮಾರ್ಗದಲ್ಲಿ 22 ಅಡಿ ಎತ್ತರದಲ್ಲಿ ದೀಪಾಲಂಕಾರವಿರಲಿದೆ. ಇದಕ್ಕಾಗಿ 4.50 ಕೋಟಿ ವಿನಿಯೋಗಿಸಲಾಗುತ್ತಿದೆ ಎಂದರು.

ಪ್ರವಾಸಿ ಪ್ಯಾಕೆಜ್ ಇರಲಿದ್ದು, ಹಲವು ತಾಣಗಳಿಗೆ ಒಂದು ಟಿಕೆಟ್ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ವಯಸ್ಕರಿಗೆ 500 ಹಾಗೂ ಮಕ್ಕಳಿಗೆ 250 ಕೊಟ್ಟು ಒಂದು ಕಡೆ ಟೆಕೆಟ್ ಖರೀದಿಸಿದರೆ ಮೈಸೂರು ಅರಮನೆ, ಚಾಮುಂಡಿಬೆಟ್ಟ, ರೈಲ್ವೆ ಮ್ಯೂಸಿಯಂ, ಮೃಗಾಲಯ ಹಾಗೂ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಪ್ರವೇಶಕ್ಕೆ ಅದನ್ನು ಬಳಸಬಹುದು. ಇದರಿಂದ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ಕಾಯುವುದು ತಪ್ಪುತ್ತದೆ.

ರೈತ ದಸರಾ ಸೆ.23ರಿಂದ 25ವರೆಗೆ ನಡೆಯಲಿದ್ದು, ಕೃಷಿ ಸಚಿವ ಬಿ.ಸಿ.ಪಾಟೀಲ ಚಾಲನೆ ನೀಡಲಿದ್ದಾರೆ. ಗ್ರಾಮೀಣ ಕ್ರೀಡೆಯನ್ನು ಮೂರು ದಿನ ನಡೆಸಲಾಗುತ್ತದೆ. ಪಶುಸಂಗೋಪನಾ ಸಚಿವರನ್ನು ಆಹ್ವಾನಿಸಲಾಗಿದೆ. ಕವಿಗೋಷ್ಠಿಯು ಈ ಬಾರಿ 4 ದಿನ ನಡೆಯಲಿದೆ. ಸೆ.26ರಿಂದ 7 ದಿನಗಳವರೆಗೆ 7 ಕಡೆಗಳಲ್ಲಿ ಯೋಗ ದಸರಾ ನಡೆಯಲಿದ್ದು, ಯೋಗ ಗುರುಗಳನ್ನು ಸನ್ಮಾನಿಸಲಾಗುತ್ತದೆ. ಸೆ.26ರಿಂದ 10 ದಿನಗಳವರೆಗೆ ಆಹಾರ ಮೇಳ ಆಯೋಜಿಸಲಾಗಿದೆ.

ಸೆ.27ರಿಂದ 7 ದಿನಗಳವರೆಗೆ ಯುವ ದಸರಾ ನಡೆಯಲಿದೆ. ಅ.1ರ ಕಾರ್ಯಕ್ರಮವು (ಸಂಜೆ 7ರಿಂದ ರಾತ್ರಿ 10.30ರವರೆಗೆ) ನಟ ಪುನೀತ್ ರಾಜ್ ಕುಮಾರ್ ಹಾಡುಗಳಿಗೆ ಮೀಸಲಿಡಲಾಗಿದೆ. ಸೆ. 27ರಿಂದ 5 ದಿನ ಮಹಿಳಾ ಮತ್ತು ಮಕ್ಕಳ ದಸರಾ, ಸೆ.26ರಿಂದ 29ರವರೆಗೆ ದಸರಾ ಕ್ರೀಡಾಕೂಟ, ಸೆ.26ರಿಂದ ೭ ದಿನಗಳವರೆಗೆ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಸೆ.26ರಿಂದ 90 ದಿನಗಳವರೆಗೆ ದಸರಾ ವಸ್ತುಪ್ರದರ್ಶನ ಇರಲಿದೆ. ಇದೇ ಮೊದಲಿಗೆ, ಕೈಗಾರಿಕಾ ದಸರಾ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸೆ.26ರಂದು ಬೆಳಿಗ್ಗೆ 9.45ರಿಂದ 10.04ರವರೆಗೆ ಸಲ್ಲುವ ಶುಭ ಲಗ್ನದಲ್ಲಿ ಉದ್ಘಾಟನೆ ನೆರವೇರಲಿದೆ. ಮುಖ್ಯ ಅತಿಥಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಳ್ಳುವುದರಿಂದ ಭದ್ರತೆ ಹೆಚ್ಚಿರುವುದರಿಂದ 2ಸಾವಿರ ಮಂದಿಗಷ್ಟೆ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತಿದೆ.

ವೇದಿಕೆಯಲ್ಲಿ ಶಿಷ್ಟಾಚಾರದಂತೆ 49ಮಂದಿಗೆ ಅವಕಾಶ ಇರುವುದಿಲ್ಲ. ರಾಷ್ಟ್ರಪತಿ ಕಚೇರಿಯಿಂದ ಬರುವ ನಿರ್ದೇಶನದಂತೆ ಕ್ರಮ ವಹಿಸಲಾಗುವುದು. ವೇದಿಕೆಯಲ್ಲಿ ಯಾರಿಗೆ ಆಸನ ಕಲ್ಪಿಸಬೇಕು ಎಂಬ ಬಗ್ಗೆ ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿ.ಪಂ. ಸಿಇಒ ಬಿ.ಆರ್.ಪೂರ್ಣಿಮಾ, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಮಂಜುನಾಥ ಸ್ವಾಮಿ, ಡಿಸಿಪಿ ಗೀತಾ ಪ್ರಸನ್ನ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು