ಮೈಸೂರು: ಕೊರೊನಾ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಕಳೆಗುಂದಿದ್ದ ದಸರಾಕ್ಕೆ ಈ ಬಾರಿ ಮತ್ತೆ ವೈಭವ ತುಂಬಲಾಗಿದೆ. ಅದ್ಧೂರಿಯಾಗಿ ದಸರಾ ಆಚರಿಸಲು ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ.
ಸಾಮಾನ್ಯವಾಗಿ ದಸರಾ ಬರುತ್ತಿದ್ದಂತೆಯೇ ಇಡೀ ಮೈಸೂರು ದಸರಾಕ್ಕೆ ತೆರೆದುಕೊಳ್ಳುತ್ತದೆ. ಜತೆಗೆ ರಸ್ತೆಗಳಿಗೆ ಡಾಂಬರೀಕರಣ, ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯುವುದು ಹೀಗೆ ಹೊಸ ಕಳೆ ಬರುತ್ತದೆ. ದಸರಾದ ಪ್ರಮುಖ ಕೇಂದ್ರವಾಗಿರುವ ಅರಮನೆಯನ್ನು ಶುಚಿಗೊಳಿಸುವ, ವಿದ್ಯುತ್ ಬಲ್ಬ್ಗಳನ್ನು ಅಳವಡಿಸುವ ಕಾರ್ಯಗಳು ನಡೆಯುತ್ತವೆ. ಅರಮನೆಯ ಪ್ರಮುಖ ದ್ವಾರಗಳಾದ ಬಲರಾಮಮ, ಜಯರಾಮ, ಮಾರ್ತಂಡ ದ್ವಾರಗಳಿಗೆ ಬಣ್ಣ ಬಳಿದು ಅಲಂಕರಿಸಲಾಗುತ್ತದೆ.
ಅರಮನೆ ಹಾಗೂ ದ್ವಾರಗಳಲ್ಲಿ ಕೆಟ್ಟು ಹೋಗಿರುವ ವಿದ್ಯುತ್ ಬಲ್ಬ್ಗಳನ್ನು ತೆಗೆದು ಹೊಸ ಬಲ್ಬ್ಗಳನ್ನು ಅಳವಡಿಸುವ ಕಾರ್ಯಗಳು ಪ್ರತಿವರ್ಷವೂ ನಡೆಯುತ್ತದೆ. ಸೆ.20ರಂದು ಅರಮನೆಯಲ್ಲಿನ ಸಿಂಹಾಸನವನ್ನು ಜೋಡಿಸಲಾಗುತ್ತಿದೆ. ಕಳೆದ ಎರಡು ವರ್ಷ ಕೊರೊನಾ ಕಾರಣದಿಂದ ಜನರಿಲ್ಲದೆ ದಸರಾ ನಡೆದಿತ್ತು. ಆದರೆ ಈ ಬಾರಿ ವೈಭವದಿಂದ ದಸರಾ ನಡೆಯುತ್ತಿರುವುದರಿಂದ ವ್ಯಾಪಾರ ವಹಿವಾಟುಗಳು ಚಿಗಿತುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ವರ್ಷಕ್ಕೊಮ್ಮೆ ಬರುವ ನಾಡ ಹಬ್ಬವಾಗಿರುವುದರಿಂದ ನಗರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿ ಹಾಗೂ ದೂರದ ಜನರಿಗೆ ದಸರಾ ಸಂಭ್ರಮದಲ್ಲಿ ಪಾಲ್ಗೊಂಡು ಖುಷಿ ಪಡುವ ಆಸೆ ಹೀಗಾಗಿಯೇ ಏನೇ ಕಷ್ಟ ಆದರೂ ಜನ ದಸರಾದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ದಸರಾ ವಿದ್ಯುಕ್ತವಾಗಿ ಆರಂಭವಾಗಲು ಕೆಲವೇ ದಿನಗಳು ಬಾಕಿಯಿದೆ.
ಸೆ.26ರ ಸೋಮವಾರ ಬೆಳಿಗ್ಗೆ 9.45 ರಿಂದ 10.05 ಗಂಟೆಯ (ವೃಶ್ಚಿಕ ಲಗ್ನ) ಚಾಮುಂಡಿ ಬೆಟ್ಟದಲ್ಲಿ ನವರಾತ್ರಿ ದಸರಾಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಲಿದ್ದಾರೆ. ವಿಜಯದಶಮಿ ಅ. 05 ರಂದು ಮಧ್ಯಾಹ್ನ 2.36 ರಿಂದ 2.50 ಗಂಟೆಯ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ನಂದೀ ಧ್ವಜ ಪೂಜೆ ನಡೆಯಲಿದ್ದು, ಸಂಜೆ 5.07 ರಿಂದ 5.18ರ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿಗಳಿಂದ ಹಾಗೂ ಗಣ್ಯಾತಿಗಣ್ಯರಿಂದ ಪುಷ್ಪಾರ್ಚನೆ ಬಳಿಕ ಜಂಬೂ ಸವಾರಿ ಹೊರಡಲಿದ್ದು ರಾತ್ರಿ ಬನ್ನಿ ಮಂಟಪಕ್ಕೆ ತಲುಪಲಿದೆ. ರಾತ್ರಿ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನಡೆಯುವುದರೊಂದಿಗೆ ಮೈಸೂರು ದಸರಾಕ್ಕೆ ತೆರೆ ಬೀಳಲಿದೆ.