ಪ್ರವಾಸೋದ್ಯಮ ಎಂಬ ಪದ ಕೇಳಿದೊಡನೆ ತಟ್ಟನೆ ನಮಗೆಲ್ಲ ಹೊಳೆಯುವುದು ಕೇರಳ ರಾಜ್ಯ. ಭೌಗೋಳಿಕವಾಗಿ ಚಿಕ್ಕ ರಾಜ್ಯವಾದರೂ ಅಲ್ಲಿನ ಸರ್ಕಾರ, ಜನತೆ ಪ್ರವಾಸೋದ್ಯಮದಲ್ಲಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಆಹಾರ, ಭಾಷೆ, ಸಂಸ್ಕೃತಿಯಲ್ಲಿರುವ ಭಿನ್ನತೆಯನ್ನು ಸಂಪನ್ಮೂಲವಾಗಿಸಿಕೊಂಡ ಅಲ್ಲಿನ ಜನತೆ ಟೆಂಪಲ್ ಟೂರಿಸಂ, ಆರೋಗ್ಯ ಪ್ರವಾಸೋದ್ಯಮ, ಬೋಟ್ ಹೌಸ್ ಗಳಿಂದ ಸಾಕಷ್ಟು ಆದಾಯ ಗಳಿಸುವ ಜತೆಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಆದರೆ ಕರ್ನಾಟಕ ರಾಜ್ಯದಲ್ಲಿ ಇಂತಹ ಪ್ರಯತ್ನಗಳು ವಿರಳ. ಇದಕ್ಕೆ ಅಪವಾದವೆಂಬಂತೆ ಇದೀಗ ಕರಾವಳಿಯಲ್ಲಿಯ ಕೆಲವೆಡೆ ಉತ್ಸಾಹಿ ಯುವಕರು ಬೋಟ್ಹೌಸ್, ಕಯಾಕಿಂಗ್ ಮೊದಲಾದ ಜಲಪ್ರವಾಸೋದ್ಯಮ ಸಾಹಸಗಳಿಗೆ ಕೈಹಾಕಿದ್ದಾರೆ. ಆ ಪೈಕಿ ಸಾಲಿಗ್ರಾಮ ಪಾರಂಪಳ್ಳಿಯ ಬ್ರಿಜ್ ಸಮೀಪ ಕಯಾಕಿಂಗ್ ನಡೆಸುತ್ತಿರುವ ಮಿಥುನ್ ಮೆಂಡನ್, ಲೋಕೇಶ್ ಮೆಂಡನ್ ಯುವಕರಿಗೆ ಮಾದರಿಯಾಗಿದ್ದಾರೆ.
ಕಯಾಕಿಂಗ್ ಎಂದರೇನು: ಸಮುದ್ರ ಮತ್ತು ನದಿ ನಡುವಿನ ಹಿನ್ನೀರಿನಲ್ಲಿ ನಡೆಸುವ ಪುಟ್ಟ ದೋಣಿಯಾನವೆ ಕಯಾಕಿಂಗ್. ಪ್ರವಾಸಿಗರೇ ಸ್ವತಃ ಪುಟ್ಟ ದೋಣಿ ಮುನ್ನಡೆಸಬೇಕು. ದೋಣಿಯಾನಕ್ಕೆ ಮೊದಲು ಕೆಲ ನಿಮಿಷಗಳ ತರಬೇತಿ ನೀಡುವ ಕ್ರಮವಿದೆ. ಭರತ ಇಳಿತದ ಅಬ್ಬರವಿರದ ಸಮಯದಲ್ಲಿ ಮಾತ್ರ ಯಾನಕ್ಕೆ ಅವಕಾಶವಿದ್ದು, ಮೊದಲು ಜಲರಾಶಿ ಕಂಡು ಅಯ್ಯೋ ದೋಣಿ ನಡೆಸುವುದು ಸಾಧ್ಯವೇ ಎಂದು ಅಂಜುವವರು ಕೆಲಹೊತ್ತಿನ ದೋಣಿ ಪಯಣದ ಬಳಿಕ ನಿಜವಾದ ಮೋಜು ಅನುಭವಿಸುತ್ತಾರೆ. ಹಿನ್ನೀರು ಕೇವಲ ಎದೆಯತ್ತರಕ್ಕೆ ಮಾತ್ರವಿದ್ದು ಯಾವುದೇ ಅಪಾಯಕ್ಕೆ ಅವಕಾಶವಿಲ್ಲ. ಆದರೂ ಸುರಕ್ಷತೆ ದೃಷ್ಟಿಯಿಂದ ದೋಣಿ ಮಾಲೀಕರು ಲೈಫ್ ಜಾಕೆಟ್ ಅಳವಡಿಸುವಂತೆ ಸಲಹೆ ನೀಡುತ್ತಾರೆ. ನಮ್ಮ ಮನೆಯ ಸದಸ್ಯರಂತೆಯೇ ಪ್ರತಿ ಪ್ರವಾಸಿಗರನ್ನು ಪರಿಗಣಿಸುವ ದೋಣಿ ಮಾಲೀಕರು ದೋಣಿ ಪಯಣದ ಪಟ್ಟುಗಳನ್ನು ಎಳೇ ಮಕ್ಕಳಿಗೆ ತಿಳಿಹೇಳುವಂತೆ ತಿಳಿಸುವ ಪರಿ ಅನನ್ಯ.
ದರವೂ ದುಬಾರಿಯಲ್ಲ: ಈ ಯುವಕರು ಆರಂಭಿಸಿದ ಕಯಾಕಿಂಗ್ ಜಲಕ್ರೀಡೆ ಸಾಹಸ ಕ್ರೀಡೆ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದು, ದರವೂ ಹಿತʻಮಿತವಾಗಿದೆ. ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಿ ಜಲಸಾಹಸದಲ್ಲಿ ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಪ್ಲಾಸ್ಟಿಕ್ ತ್ಯಾಜ್ಯ ತೊಂದರೆ: ನದಿ ತೊರೆಗಳಿಗೆ ಜನರು ಎಸೆಯುವ ಕಸ, ಪ್ಲಾಸ್ಟಿಕ್ ತ್ಯಾಜ್ಯಗಳು ಹಿನ್ನೀರಿನ ಪ್ರದೇಶದಲ್ಲಿ ಸಂಗ್ರಹಗೊಂಡು ತೊಂದರೆ ಅನುಭವಿಸುವಂತಾಗದೆ. ಪದೇ ಪದೇ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡರೂ ಸಮಸ್ಯೆ ಮರುಕಳಿಸುತ್ತಿದೆ ಎಂದು ದೋಣಿ ಮಾಲೀಕರು ನುಡಿಯುತ್ತಾರೆ.