ಮೈಸೂರು: ಕೆಪಿಎಲ್ ಪಂದ್ಯಾವಳಿ ಆ.7ರಿಂದ ಆರಂಭವಾಗಲಿದ್ದು, ಈ ಬಾರಿಯ ಮಹಾರಾಜ ಟಿ20 ಟ್ರೋಫಿಯ ಮೇಲೆ ಕಣ್ಣಿಟ್ಟಿರುವ ಮೈಸೂರು ವಾರಿಯರ್ಸ್ 20 ಮಂದಿ ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದೆ.
2014ರ ಕೆಪಿಎಲ್ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಮೈಸೂರು ವಾರಿಯರ್ಸ್ ಬಳಿಕ ಚಾಂಪಿಯನ್ ಆಗುವಲ್ಲಿ ವಿಫಲವಾಗುತ್ತಿದೆ. ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷ ಕೆಪಿಎಲ್ ನಡೆದಿರಲಿಲ್ಲ. ಈ ಬಾರಿ ಕೆಪಿಎಲ್ ಬದಲಿಗೆ ಮಹಾರಾಜ ಟಿ20 ಟ್ರೋಫಿ ಹೆಸರಿನಲ್ಲಿ ಟೂರ್ನಿ ನಡೆಯುತ್ತಿದ್ದು, ಪ್ರಶಸ್ತಿಯನ್ನು ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದ್ದು ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಅದಕ್ಕಾಗಿ ಯುವ, ಪ್ರತಿಭಾವಂತ ಆಟಗಾರರನ್ನು ಆಯ್ಕೆ ಮಾಡಿದೆ. ತಂಡದಲ್ಲಿ ಬಿಗ್ ಹಿಟ್ಟರ್ಗಳು, ಆಲ್ರೌಂಡರ್ಗಳು, ಯುವ ವೇಗಿಗಳು ಹಾಗೂ ಉತ್ತಮ ಸ್ಪಿನ್ನರ್ಗಳಿದ್ದು, ಮೈಸೂರು ವಾರಿಯರ್ಸ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.
ಪಂದ್ಯಾವಳಿಯ ಉದ್ಘಾಟನಾ ಪಂದ್ಯ ಆ.7ರಂದು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಶಿವಮೊಗ್ಗ ಸ್ಟ್ರೈಕರ್ಸ್ ತಂಡವನ್ನ ಎದುರಿಸಲಿದೆ.
ಈ ಕುರಿತು ಮಾತನಾಡಿದ ತಂಡದ ಮಾಲೀಕ ಅರ್ಜುನ್ ರಂಗ, ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಟೂರ್ನಿಮೆಂಟ್ ಆಯೋಜನೆ ಮಾಡಲು ಸಾಧ್ಯವಾಗಿರಲಿಲ್ಲ. ಈ ವರ್ಷ ಮಹಾರಾಜ ಟ್ರೋಫಿ ಹೆಸರಿನಲ್ಲಿ ಟೂರ್ನಿಮೆಂಟ್ ನಡೆಯುತ್ತಿದ್ದು, ಪ್ರಶಸ್ತಿ ಗೆಲ್ಲಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಕರುಣ್ ನಾಯರ್ ತಂಡವನ್ನು ಮುನ್ನಡೆಸಲಿದ್ದು, ಅವರ ನಾಯಕತ್ವದಡಿ ತಂಡ ಅದ್ಬುತ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವಿದೆ. ಕೆ.ಎಲ್ ಅಶ್ವಥ್ ಅವರಿ ಅಚ್ಚರಿ ಮೂಡಿಸುವಂತಹ ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಸಮರ್ಥ ತರಬೇತುದಾರರು, ಸಹಾಯಕ ಸಿಬ್ಬಂದಿ ನಮ್ಮೊಂದಿಗಿದ್ದು, ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ. ಪಂದ್ಯಗಳನ್ನು ವೀಕ್ಷಿಸಲು ಕಾತರನಾಗಿದ್ದೇನೆ ಎಂದು ಹೇಳಿದ್ದಾರೆ.