ಮೈಸೂರು: ಐತಿಹಾಸಿಕ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿ ಬುಧವಾರ ನಡೆಯಲಿದ್ದು ಬಿಗಿ ಪೊಲೀಸ್ ಭದ್ರತೆಯನ್ನು ಮಾಡಲಾಗಿದೆ.
ಈಗಾಗಲೇ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಅರಮನೆ ಸುತ್ತಮುತ್ತ ಹಾಗೂ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಹದ್ದಿನ ಕಣ್ಣಿಡಲಾಗಿದೆ. ಮೈಸೂರು ನಗರದ 1255, ಹೊರ ಜಿಲ್ಲೆಗಳ 3580 ಸಿಬ್ಬಂದಿ, 650 ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ ಒಟ್ಟು 3485 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅ.5ರಂದು ಬೆಳಗ್ಗೆ 7ಗಂಟೆಯಿಂದ ಸಂಜೆ 6ರವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ. ಅರಮನೆಗೆ ಪ್ರವೇಶ ಮಾಡುವ ದ್ವಾರಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದು. ಗಣ್ಯರು, ಸಾರ್ವಜನಿಕರು ಪ್ರವೇಶಿಸುವ ಕಡೆ ತಪಾಸಣೆ ಮಾಡಲಾಗುತ್ತದೆ. ಗಣ್ಯರ ಹೆಸರೇಳಿಕೊಂಡು ಅರಮನೆ ಪ್ರವೇಶಿಸಲು ಯತ್ನಿಸುವವರನ್ನು ಮುಲಾಜಿಲ್ಲದೆ ವಾಪಸ್ ಕಳುಹಿಸಲು ಸೂಚಿಸಲಾಗಿದೆ. ಅರಮನೆಯ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಹದ್ದಿನ ಕಣ್ಣಿಡಲಾಗಿದೆ.
ಅರಮನೆ ಅಂಗಳದಲ್ಲಿ ಅಂಬಾರಿ ಆನೆಯ ಮೇಲಿನ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವರು, ಮೇಯರ್, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ವೇದಿಕೆ ಏರಲು ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೂ ಅವಕಾಶ ಕಲ್ಪಿಸಲಾಗಿದ್ದು, ಅವರೂ ಸಹ ಅಂಬಾರಿಯಲ್ಲಿ ಆಸೀನಳಾದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಉಳಿದಂತೆ ಬೇರೆ ಜನಪ್ರತಿನಿಧಿಗಳಿಗೆ ಅವಕಾಶ ಇರುವುದಿಲ್ಲ.
ಅ.5ರಂದು ಬುಧವಾರ ಮಧ್ಯಾಹ್ನ 2.36ರಿಂದ 2.50ರ ಒಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂದಿಧಜಕ್ಕೆ ಪೂಜೆ ಸಲ್ಲಿಸುವರು. ಬಳಿಕ ಗಜಪಡೆಯ ಮಾಜಿ ಕ್ಯಾಪ್ಟನ್ ಅರ್ಜುನ ನಿಶಾನೆ ಆನೆಯಾಗಿ ದಸರಾ ಮೆರವಣಿಗೆಯನ್ನು ಮುನ್ನಡೆಸಲಿದ್ದಾನೆ. ಸಂಜೆ ೫.೭5.07ರಿಂದ 5.18ರ ಒಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಪುಷ್ಪಾರ್ಚನೆ ನೆರವೇರಿಸಲಾಗುತ್ತಿದ್ದು, ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತು ಅಭಿಮನ್ಯು ಸಾಗಲಿದ್ದಾನೆ.
ಇನ್ನು ಜಂಬೂಸವಾರಿಯಲ್ಲಿ ರಾಜ್ಯದ 31 ಜಿಲ್ಲಾ ಪಂಚಾಯಿತಿಗಳ, ರಾಜ್ಯಮಟ್ಟದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು, ಸ್ತಬ್ಧಚಿತ್ರ ಉಪಸಮಿತಿ ಸೇರಿ 43 ಸ್ತಬ್ಧಚಿತ್ರಗಳು ಸೇರಿದಂತೆ 100ಕ್ಕೂ ಜಾನಪದತಂಡಗಳು ಭಾಗವಹಿಸಲಿವೆ. ಜಂಬೂಸವಾರಿ ಅರಮನೆ ಆವರಣದಿಂದ ಸಯ್ಯಾಜಿರಾವ್ ರಸ್ತೆಯ ಮೂಲಕ ಬನ್ನಿಮಂಟಪದವರೆಗೆ ಹಾದು ಹೋಗಲಿದೆ. ಅರಮನೆ ಆವರಣದಲ್ಲಿ 20 ಸಾವಿರ ಮಂದಿ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಪೆಂಡಾಲ್ ಹಾಕಿ ಆಸನದ ವ್ಯವಸ್ಥೆ ಮಾಡಲಾಗಿದೆ. ಗೋಲ್ಡ್ ಕಾರ್ಡ್, ವಿವಿಐಪಿ, ವಿಐಪಿ ಪಾಸ್ವುಳ್ಳವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಜಂಬೂ ಸವಾರಿ ವೇಳೆ ಸಾರ್ವಜನಿಕರು ರಸ್ತೆಗೆ ಬರದಂತೆ ಎರಡೂ ಕಡೆ ಮರದ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಕೆ.ಆರ್.ವೃತ್ತ, ಆಯುರ್ವೇದ ಕಾಲೇಜು ವೃತ್ತ, ಹೈವೈ ಸರ್ಕಲ್ ಸೇರಿದಂತೆ ಪ್ರಮುಖ ವೃತ್ತ ಸೇರಿದಂತೆ ಅಂಬಾರಿ ಸಂಚರಿಸುವ ಮಾರ್ಗ ಹಾಗೂ ವಿವಿಧೆಡೆಗಳಲ್ಲಿ ಸಾವಿರಕ್ಕೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜಂಬೂಸವಾರಿ ಅರಮನೆಯಿಂದ ಹೊರಟು ಬನ್ನಿಮಂಟಪಕ್ಕೆ ತೆರಳುವ ಮೂಲಕ ದಸರಾ ಸಂಭ್ರಮಕ್ಕೆ ತೆರೆ ಬೀಳಲಿದೆ.