ಮೈಸೂರು: ಬಡಗಿರಿಜನ ಹಾಡಿಗಳ ಜನರ ಪಾಲಿಗೆ ಡಾಕ್ಟರ್ ಆಗಿರುವ ಪ್ರಶಾಂತ್ ಕುಮಾರ್ ಗಂಗೊಳ್ಳಿ ಅವರು ನೈಜವಾಗಿ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕ ಅಧಿಕಾರಿ. ಆದರೆ ಗಿರಿಜನ ಹಾಡಿಗೆ ತೆರಳಿ ಅವರಿಗೆ ಆರೋಗ್ಯ ಸೇವೆ ನೀಡುವ ಮೂಲಕ ಗಮನಸೆಳೆದಿದ್ದಾರೆ.
ಗಿರಿಜನರಿಗೆ ಆರೋಗ್ಯ ಸಲಹೆ ನೀಡುತ್ತಾ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವುದರಿಂದ ಹಾಡಿಯ ಗಿರಿಜನರು ಪ್ರೀತಿಯಿಂದ ಡಾಕ್ಟರ್ ಎಂದೇ ಕರೆಯುತ್ತಾರೆ. ಇದರ ಜತೆಗೆ ಜೊತೆಗೆ ಕೃಷಿಯಲ್ಲೂ ಛಾಪು ಮೂಡಿಸಿ ಸೈ ಎನಿಸಿಕೊಂಡು, ಗೋ ರಕ್ಷಕರಾಗಿ, ಪ್ರಾಣಿ ಪ್ರಿಯರಾಗಿ, ಪರಿಸರ ಜಾಗೃತಿಯ ನಡುವೆಯೇ ನೀರಿನ ಮಹತ್ವ ಸಾರುತ್ತಿರುವುದು ಇವರೊಬ್ಬ ಸಾಧಕ ಎನ್ನುವುದನ್ನು ನಿರೂಪಿಸಿದೆ.
ರೋಗಿಗಳೊಂದಿಗೆ ಬೆರೆತು ವೈದ್ಯರು ಮತ್ತು ರೋಗಿಯ ಸಂಪರ್ಕ ಸೇತುವೆಯಾಗಿ ನಗುಮುಖದಿಂದಲೇ ರೋಗಿಗಳನ್ನು ಆರೈಕೆ ಮಾಡಿ, ರೋಗಿಗಳಲ್ಲಿ ಅತ್ಮವಿಶ್ವಾಸ ತುಂಬಿ ರೋಗ ಗುಣಪಡಿಸುವ ಗುಣ ಹೊಂದಿರುವ ಅವರು ತಮ್ಮ ಮನೆಯನ್ನೇ ಚಿಕ್ಕ ಗೋ ಶಾಲೆಯಾಗಿಸಿ ಗೋ ರಕ್ಷಣೆ ಜತೆಯಲ್ಲೇ ಆಡು, ಕುರಿ ಸಾಕಣೆ ಮಾಡಿಕೊಂಡು ತಮ್ಮ ಒಂದೂವರೆ ಎಕರೆ ಭೂಮಿಯಲ್ಲಿ ಹಲವು ಮಿಶ್ರ ಬೆಳೆಗಳನ್ನು ಬೆಳೆದು ಪ್ರಗತಿಪರ ಕೃಷಿರಾಗಿ ಗಮನಸೆಳೆದಿದ್ದಾರೆ.
ಇವರ ಕಾರ್ಯ ಇಷ್ಟಕ್ಕೆ ಮುಗಿಯುವುದಿಲ್ಲ. ಬಿಡುವಿನ ವೇಳೆಯಲ್ಲಿ ಹಾಡಿಯ ಬಡ ಗಿರಿಜನರಲ್ಲಿಗೆ ತೆರಳಿ ಸದಾ ನಗುಮುಖದಿಂದಲೇ ಉಚಿತ ಆರೋಗ್ಯ ಸೇವೆ ನೀಡುವ ಮೂಲಕ ತಮ್ಮ ಶುಶ್ರೂಷಕ ವೃತ್ತಿಯ ಜೊತೆ ಜೊತೆಯಲ್ಲೇ ಜನರಲ್ಲಿ ಪರಿಸರ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಶ್ರೂಷಕ ಅಧಿಕಾರಿಯಾಗಿ ಪ್ರಶಾಂತ್ ಕುಮಾರ್ ಗಂಗೊಳ್ಳಿ ಅವರು ಕಳೆದ ಏಳು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ಆರೋಗ್ಯ ಇಲಾಖೆಯಲ್ಲಿ ಕಳೆದ 26 ವರ್ಷಗಳಿಂದ ಶುಶ್ರೂಷಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು ಬಂದರು ಗ್ರಾಮ ಗಂಗೊಳ್ಳಿಯವರಾದ ಪ್ರಶಾಂತ್ ಈಗ ಹೆಚ್.ಡಿ.ಕೋಟೆ ತಾಲ್ಲೂಕಿನ ಕೆ.ಎಡತೊರೆ ಗ್ರಾಮದಲ್ಲಿ ವಾಸವಿದ್ದಾರೆ.
ತಾನೊಬ್ಬ ಶುಶ್ರೂಷಕರಾಗಿ ಮಾನವೀಯ ಗುಣಗಳೊಂದಿಗೆ ಸದಾ ನಗುತ್ತಾ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಸೇವೆ ನೀಡಬೇಕು, ಅವಕಾಶ ಸಿಕ್ಕಾಗಲೆಲ್ಲ ಜನರಲ್ಲಿ ಪರಿಸರ, ನೀರಿನ ಜಾಗೃತಿ ಮೂಡಿಸಿ ನಮ್ಮ ಪರಿಸರ ಮತ್ತು ಜಲ ಸಂರಕ್ಷಣೆ ಜೊತೆಗೆ ಕಸಾಯಿ ಖಾನೆಗೆ ಹೋಗುವ ಗೋವುಗಳನ್ನು ರಕ್ಷಣೆ ಮಾಡಿ ಅವುಗಳ ಪೋಷಣೆ ಮಾಡುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.
ನಾನು ನನ್ನದೆನ್ನುವ ಸ್ವಾರ್ಥ ಜೀವನದಿಂದ ಪ್ರತಿಯೊಬ್ಬರು ಹೊರಬಂದು ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಪರಿಸರವನ್ನು ಪ್ರೀತಿಸುವ ಕೆಲಸ ಮಾಡಬೇಕು ಎಂಬ ಉದ್ದೇಶ ಹೊಂದಿರುವ ಅವರು ಅದರತ್ತ ಹೆಚ್ಚಿನ ಗಮನಹರಿಸುತ್ತಿದ್ದಾರೆ.
ಶುಶ್ರೂಷಕ ಅಧಿಕಾರಿ ಪ್ರಶಾಂತ್ ಗಂಗೊಳ್ಳಿ ಅವರ ಆರೋಗ್ಯ ಸೇವೆ ಹಿಂದಿನ ಬಗ್ಗೆ ನೋಡುವುದಾರೆ ಅವರ ಕುಟುಂಬದಲ್ಲಿ ತಾತ, ತಂದೆಯೂ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡಿದ್ದು, ಪತ್ನಿ ಜಯಂತಿ ಕೂಡ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಶಾಂತ್ ಕುಮಾರ್ ಗಂಗೊಳ್ಳಿ ಮತ್ತು ಅವರ ಕುಟುಂಬ ಮಹಾಮಾರಿ ಕೊರೊನಾ ಸಂದರ್ಭ ಉತ್ತಮ ಕೆಲಸ ಮಾಡಿದೆ.
ಶುಶ್ರೂಷಕ ಜೀವ ರಕ್ಷಕಃ ಎಂಬ ಧ್ಯೇಯದೊಂದಿಗೆ ಸದಾ ಬಡ ಜನರ ಹಿತ ಬಯಸುವ ಹಾಡಿಯ ಬಡ ಜನರ ಪಾಲಿನ ಡಾಕ್ಟರ್ ಆಗಿರುವ ಶುಶ್ರೂಷಕ ಅಧಿಕಾರಿ ಪ್ರಶಾಂತ್ ಕುಮಾರ್ ಗಂಗೊಳ್ಳಿ ಅವರ ಸೇವೆಯನ್ನು ಗುರುತಿಸಿ ಈಗಾಗಲೇ ಫ್ಲಾರೆನ್ಸ್ ನೈಟಿಂಗೇಲ್ ಅವಾರ್ಡ್, ಮೈಸೂರು ಜಿಲ್ಲಾ ಶುಶ್ರೂಷಕ ಸಂಘದ ಪ್ರಶಸ್ತಿ,ಮದರ್ ತೇರೆಸಾ ನ್ಯಾಷನಲ್ ಅವಾರ್ಡ್ ದೊರೆತಿದೆ.
ಮನುಷ್ಯನಾಗಿ ಒಬ್ಬರು ಮತ್ತೊಬ್ಬರಿಗೆ ನೆರವಾಗುವ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು, ಸೇವೆಯಲ್ಲಿ ಸ್ವಾರ್ಥ ಇರಬಾರದು ಶುಶ್ರೂಷಕ ವೃತ್ತಿ ಬಹಳ ಶ್ರೇಷ್ಠವಾಗಿದ್ದು ನಾನು ಮತ್ತು ನನ್ನ ಪತ್ನಿ ಜಯಂತಿ ಶುಶ್ರೂಷಕ ಸೇವೆ ಸಲ್ಲಿಸುತ್ತಿದ್ದು, ಸಮಯ ಸಿಕ್ಕಾಗಲೇಲ್ಲ ಕೃಷಿಯ ಜೊತೆಗೆ ಹಾಡಿಯ ಗಿರಿಜನರ ಆರೋಗ್ಯ ಸೇವೆ ನೀಡಿ, ದೇಶದ ಪ್ರಜೆಯಾಗಿ ಯುವಕರಲ್ಲಿ ಗೋ ರಕ್ಷಣೆ ಜೊತೆಗೆ ಪರಿಸರ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದಾಗಿ ಅವರು ಹೇಳುತ್ತಾರೆ.