ಮೈಸೂರು: ಒಬ್ಬರಿಗೊಬ್ಬರು ಬೈದಾಡಿಕೊಳ್ಳುತ್ತಾ ಬದ್ಧ ವೈರಿಗಳಂತಾಗಿದ್ದ ಶಾಸಕರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್ ಭಾನುವಾರ ಮುಖಾಮುಖಿಯಾಗಿ ಕೆಲಕಾಲ ಚರ್ಚಿಸಿದ್ದು ರಾಜ್ಯ ಮತ್ತು ಜಿಲ್ಲಾ ರಾಜಕೀಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ.
ಕೆ.ಆರ್.ನಗರ ತಾಲೂಕು ಒಕ್ಕಲಿಗರ ಸಂಘ ಅಲ್ಲಿನ ಎಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ಜು.31ರಂದು ಏರ್ಪಡಿಸಿರುವ ನಾಡಪ್ರಭು ಕೆಂಪೇಗೌಡರ 513ನೇ ಜಯಂತ್ಯುತ್ಸವ, 2021-22ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಬರುವಂತೆ ಜಿ.ಟಿ. ದೇವೇಗೌಡ ಅವರನ್ನು ಶಾಸಕ ಸಾ.ರಾ.ಮಹೇಶ್ ಆಹ್ವಾನಿಸಿದರು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ.ಅಣ್ಣೇಗೌಡ, ಸಮಾಜದ ಮುಖಂಡರಾದ ಎಚ್.ಪಿ.ಶಿವಣ್ಣ, ಕೆ.ಎಲ್.ರಮೇಶ್, ಎಂ.ಟಿ.ಕುಮಾರ್ ಎಂ.ಕೆ.ಮಹದೇವ್, ಕೇಶವ್ ಮೊದಲಾದವರು ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಭೇಟಿ ಮಾಡಿ ಆಹ್ವಾನಿಸಿದರು.
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನ ನಂತರ ಜೆಡಿಎಸ್ನಿಂದ ದೂರವಾಗಿದ್ದ ಜಿ.ಟಿ.ದೇವೇಗೌಡರು ಇನ್ನೇನು ಕಾಂಗ್ರೆಸ್ ಸೇರಿಬಿಟ್ಟರು ಎಂಬ ವಾತಾವರಣ ಇತ್ತು. ಅಲ್ಲಿ ತಮಗೆ ಹಾಗೂ ತಮ್ಮ ಮಗನಿಗೆ ವಿಧಾನಸಭಾ ಚುನಾವಣಾ ಸೀಟು ಸಿಗುವುದಿಲ್ಲ ಎಂಬ ಕಾರಣದಿಂದ ಬಿಜೆಪಿಗೆ ಹೋಗುತ್ತಾರೆ ಎಂದು ಹೇಳಲಾಗುತ್ತಿತ್ತು. ಹೀಗಿರುವಾಗ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಜಿಟಿಡಿ ಅವರ ವಿರುದ್ಧ ಮಾತನಾಡಿದ್ದು, ಸಿದ್ದರಾಮಯ್ಯಅವರು ಬಿಜೆಪಿಗೆ ಹೋಗಬೇಡ ಎಂದಿದ್ದಾರೆ, ಕಾಂಗ್ರೆಸ್ಗೆ ಆಹ್ವಾನಿಸಿಲ್ಲ ಎಂದು ಜಿಟಿಡಿ ಹೇಳಿದ ನಂತರ ಈ ಬೆಳವಣಿಗೆ ನಡೆದಿರುವುದು ಮಹತ್ವ ಪಡೆದಿದೆ. ಜತೆಗೆ ಜಿಟಿಡಿ-ಸಾ.ರಾ.ಮಹೇಶ್ ಇಬ್ಬರೇ ಸುಮಾರು 50 ನಿಮಿಷಗಳ ಕಾಲ ಚರ್ಚಿಸಿದ್ದಾರೆ. ಹೀಗಾಗಿ ಈ ಇಬ್ಬರ ಮತ್ತೆ ಒಂದಾಗುವ ಆಶಾಭಾವನೆ ಕಾರ್ಯಕರ್ತರಲ್ಲಿ ಕಂಡು ಬರುತ್ತಿದೆ.