ಮೈಸೂರು: ಈ ಬಾರಿ ಎಂದಿನಂತೆ ಐತಿಹಾಸಿಕ ಮೈಸೂರು ದಸರಾ ಅದ್ಧೂರಿಯಾಗಿ ನಡೆಯುವ ಸಾಧ್ಯತೆಯಿದ್ದು. ಈ ಸಂಬಂಧ ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಜು.10ರ ಬಳಿಕ ದಸರಾ ಉನ್ನತ ಸಮಿತಿ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ. ಆ ಬಳಿಕ ಮೈಸೂರಿನಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಐತಿಹಾಸಿಕ ಮೈಸೂರು ದಸರಾ ಕಳೆಗುಂದಿತ್ತು. ಆದರೆ ಈ ಬಾರಿ ಮತ್ತೆ ದಸರಾ ವೈಭವ ಮರುಕಳಿಸುವ ಲಕ್ಷಣಗಳು ಕಂಡು ಬಂದಿದೆ. ಇದೀಗ ಆಷಾಢ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ದರ್ಶನಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ದಸರಾ ಅದ್ಧೂರಿಯಾಗಿ ನಡೆಯುವುದು ಖಚಿತವಾಗಿದೆ. ಈಗಾಗಲೇ ಅಲ್ಲಲ್ಲಿ ಕೊರೊನಾ ಪ್ರಕರಣಗಳು ಕಾಣಿಸುತ್ತಿದ್ದರೂ ಈ ಹಿಂದಿನ ತೀವ್ರತೆ ಇಲ್ಲದಿರುವುದರಿಂದ ಮತ್ತು ಮುಂದಿನ ದಿನಗಳಲ್ಲಿ ಪ್ರಕರಣ ಇಳಿಮುಖವಾಗಬಹುದು ಎಂಬ ಆಲೋಚನೆಗಳು ಜನರಲ್ಲಿದೆ.
ಹಾಗಾಗಿ ದಸರಾವನ್ನು ಸರ್ಕಾರ ಅದ್ಧೂರಿಯಾಗಿ ಆಚರಿಸಬಹುದು ಎಂಬ ನಿರೀಕ್ಷೆ ಜನರದ್ದಾಗಿದ್ದು, ದಸರಾ ನಂಬಿಕೊಂಡಿರುವ ಉದ್ಯಮಿಗಳು, ವ್ಯಾಪಾರಿಗಳು ಸೇರಿದಂತೆ ಜನ ಖುಷಿಪಡುತ್ತಿದ್ದಾರೆ. ಎಲ್ಲರ ಮೊಗದಲ್ಲೂ ಸಂತಸ ಮನೆ ಮಾಡುತ್ತಿದೆ.