ಮೈಸೂರು: ಎರಡು ವರ್ಷಗಳ ಬಳಿಕ ದಸರಾ ಫಲಪುಷ್ಪ ಪ್ರದರ್ಶನ ಸೆ.26ರಿಂದ ಅ.5ರವರೆಗೆ ಅದ್ದೂರಿಯಾಗಿ ನಡೆಯುತ್ತಿದ್ದು, ಕುಪ್ಪಣ್ಣ ಪಾರ್ಕಿನ ಗಾಜಿನ ಮನೆಯಲ್ಲಿ ಪುಷ್ಪಗಳಲ್ಲಿಯೇ ರಾಷ್ಟ್ರಪತಿ ಭವನವನ್ನು ನಿರ್ಮಿಸಲಾಗುವುದಾಗಿ ಮೈದಳೆಯಲಿದೆ ಎಂದು ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನಕ್ಕೆ ಹಾರ್ಡಿಂಜ್ ವೃತ್ತದಲ್ಲಿ ಕುಪ್ಪಣ್ಣ ಪಾರ್ಕ್ (ನಿಶಾದ್ ಬಾಗ್) ಸಜ್ಜಾಗಿದ್ದು, ಉದ್ಯಾನದ ಆವರಣದಲ್ಲಿ ಪುಷ್ಪಗಳಿಂದ ರಾಷ್ಟ್ರಪತಿ ಭವನ, ನಟ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿ ನಿರ್ಮಾಣವಾಗುತ್ತಿದೆ. ಸೋಮವಾರ ಇಡೀ ಉದ್ಯಾನ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ ಎಂದು ಹೇಳಿದ್ದಾರೆ.
ಗಾಜಿನ ಮನೆಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಈ ಬಾರಿ ಅದ್ಧೂರಿಯಾಗಿ ರಾಷ್ಟ್ರಪತಿ ಭವನವನ್ನು ಕೆಂಪು, ಬಿಳಿ ಗುಲಾಬಿ ಹಾಗೂ ಸೇವಂತಿ ಹೂಗಳಿಂದ ಸುಮಾರು 20 ಅಡಿ ಎತ್ತರದ ಭವನ ನಿರ್ಮಿಸಲಾಗುವುದು. ಜತೆಗೆ ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ಈ ಬಾರಿ ಪುನೀತ್ ರಾಜ್ ಕುಮಾರ್ ಅವರ ಸಾಧನೆಯ ವಿವರದೊಂದಿಗೆ ಪುತ್ಥಳಿಗಳನ್ನು ಸ್ಥಾಪಿಸಿ ಹೂವಿನೊಂದಿಗೆ ಅಲಂಕರಿಸಲಾಗುವುದು. ಪುತ್ಥಳ ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು.
ಇದರೊಂದಿಗೆ ಮೈಸೂರು ರಾಜರು ತಮ್ಮ ಆಳ್ವಿಕೆಯ ಸಮಯದಲ್ಲಿ ಜನರು ವಿಶ್ರಾಂತಿ ಪಡೆಯಲು ತಂಡೀ ಸಡಕ್ ಅನ್ನು ನಿರ್ಮಿಸುತ್ತಿದ್ದರು. ಅದರ ಪ್ರತಿರೂಪವನ್ನು ಗಾಜಿನ ಮನೆಯ ಮುಂದೆ ನಿರ್ಮಿಸಲಾಗುತ್ತದೆ. ಉದ್ಯಾನದಲ್ಲಿ 7 ಅಡಿಯ ಜೇನುಹುಳು, 12 ಅಡಿಯ ಜಿರಾಫೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಹಲವು ಗೊಂಬೆಗಳನ್ನು ಹೂವಿನಿಂದ ಅಲಂಕರಿಸಲಾಗುವುದು. ಬೆಟ್ಟದ ನಂದಿ ಪ್ರತಿಮೆ, 7 ಅಡಿ ದಪ್ಪ ಮೆಣಸಿನ ಕಾಯಿಯಿಂದ ಒಂದು ಮನೆಯ ನಿರ್ಮಾಣದೊಂದಿಗೆ ನಾನಾ ವೈವಿಧ್ಯಮಯ ಪರಿಕಲ್ಪನೆಗಳನ್ನು ನಿರ್ಮಿಸಲಾಗುವುದು. ಪ್ರತಿ ದಿನ ಸಂಜೆಯ ವೇಳೆ ಅನೇಕ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಇಲಾಖೆಯಿಂದ 50ಸಾವಿರಕ್ಕೂ ಹೆಚ್ಚು ಹೂವಿನ ಗಿಡಗಳನ್ನು ಬೆಳೆದಿದ್ದು, ಇಡೀ ಕುಪ್ಪಣ್ಣ ಪಾರ್ಕ್ ಅನ್ನು ಹೂವುಗಳಿಂದ ಅಲಂಕರಿಸಲಾಗುವುದು. ಅವುಗಳಲ್ಲಿ ಮುಖ್ಯವಾಗಿ ಮಾರಿಗೋಲ್ಡ್, ಫ್ರೆಂಚ್ ಮಾರಿಗೋಲ್ಡ್, ಜಿನಿಯಾ, ಡಾಲಿಯಾ ಸೇರಿದಂತೆ ಹಲವು ಪ್ರಭೇದದ ಹೂವಿನ ಗಿಡಗಳು, ಪುಣೆಯಿಂದ ವಿಶೇಷ ಅಲಂಕಾರಿಕ ಗಿಡಗಳನ್ನು ತರಲಾಗುತ್ತಿದೆ.
ಮೇಳದಲ್ಲಿ ಇಲಾಖೆಗೆ ಸಂಬಂಧಿಸಿದ ಮಳಿಗೆಗಳು, ಸಾವಯವ ಮಳಿಗೆಗಳು, ಕೃಷಿಗೆ ಸಂಬಂಧಿಸಿದ ಮಳಿಗೆಗಳು, ಐಐಎಚ್ಆರ್, ಸಿಡಿಬಿ, ಎನ್ಎಚ್ಬಿ, ಸಿಎಫ್ಟಿಆರ್ಐ ಸಂಸ್ಥೆಗಳಿಗೆ ಪತ್ರ ಬರೆದಿದ್ದು ರೈತರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಫಲಪುಷ್ಪ ಪ್ರದರ್ಶನ ಸಮಿತಿಯ ಅಧ್ಯಕ್ಷ ಎಸ್.ಆರ್.ನಂಜಪ್ಪ, ಉಪಾಧ್ಯಕ್ಷ ಓಂ.ಶ್ರೀನಿವಾಸ, ಸುಶೀಲಾ, ಇಲಾಖೆಯ ಜಂಟಿ ನಿರ್ದೇಶಕ ನಾಗರಾಜು, ಹಿರಿಯ ಸಹಾಯಕ ನಿರ್ದೇಶಕ ರುದ್ರೇಶ್, ಸಹಾಯಕ ನಿರ್ದೇಶಕ ನವೀನ್ ಇದ್ದರು.